Home News ಶುದ್ಧ ನೀರನ್ನು ಕೇಳುವುದು ನಮ್ಮ ಹಕ್ಕಲ್ಲವೆ?

ಶುದ್ಧ ನೀರನ್ನು ಕೇಳುವುದು ನಮ್ಮ ಹಕ್ಕಲ್ಲವೆ?

0

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಶುದ್ಧ ನೀರಿನ ಅಗತ್ಯತೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಖ್ಯಮಂತ್ರಿಗಳಿಗೆ ಅಂಚೆ ಕಾರ್ಡುಗಳ ಮೂಲಕ ತಿಳಿಸಬೇಕಿದೆ ಎಂದು ಸಾಹಿತಿ ಸ.ರಘುನಾಥ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಈಚೆಗೆ ವಿದ್ಯಾರ್ಥಿಗಳಿಗೆ ಶುದ್ಧ ನೀರಿನ ಹಕ್ಕೊತ್ತಾಯ ಮತ್ತು ಅಸ್ಪೃಶ್ಯತಾ ನಿವಾರಣೆ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳಿಗೆ ‘ಹರಿದು ಬರದಿರಲಿ ವಿಷದ ಕೊಳಚೆ, ಹರಿಸಿ ತನ್ನಿ ಶುದ್ಧ ನೀರಿನ ಹೊಳೆ’, ‘ಶುದ್ಧ ನೀರು ಕೊಡಿ, ಬದುಕಿಗೆ ಬೇಸಾಯಕ್ಕೆ’ ಎಂದು ಬರೆದಿರುವ ಒಂದು ಲಕ್ಷ ಅಂಚೆ ಕಾರ್ಡುಗಳನ್ನು ಬರೆದು ಶುದ್ಧ ನೀರಿನ ಹಕ್ಕೊತ್ತಾಯವನ್ನು ಮಾಡಬೇಕು. ಜಿಲ್ಲೆಗೆ ನೀರಿನ ಅಗತ್ಯತೆಯ ಕುರಿತಂತೆ ರೂಪಿಸಿರುವ ಕರಪತ್ರಗಳನ್ನು ತಮ್ಮ ಮನೆಗಳಲ್ಲಿ ತೋರಿಸಿ ವಿವರಿಸಬೇಕು. ಹಸಿರನ್ನು ಉಳಿಸಿ ಬೆಳೆಸಬೇಕು. ಅಸ್ಪೃಶ್ಯತಾ ನಿವಾರಣೆಯು ವಿದ್ಯಾರ್ಥಿಗಳ ಮೂಲಕವೂ ಸಮಾಜಕ್ಕೆ ತಲುಪಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಈ ನಾಡಿಗೆ ಹಾಲು, ರೇಷ್ಮೆ , ಚಿನ್ನ, ತರಕಾರಿ ಮುಂತಾದ ಕೊಡುಗೆಯನ್ನು ಕೊಟ್ಟಿರುವಾಗ, ನಾಡಿನ ನದಿ ನೀರಿನಲ್ಲಿ ಪಾಲನ್ನು ಕೇಳಬಾರದೇ. ಶುದ್ಧ ನೀರನ್ನು ಕೇಳುವುದು ನಮ್ಮ ಹಕ್ಕಲ್ಲವೆ ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅಂಚೆ ಕಾರ್ಡುಗಳನ್ನು ನೀಡಿ ಅವರಿಂದ ಮುಖ್ಯಮಂತ್ರಿಗಳಿಗೆ ಶುದ್ಧ ನೀರನ್ನು ನೀಡುವಂತೆ ಬರೆಸಲಾಯಿತು.
ಮುಳಬಾಗಿಲು ಡಾ.ಅರಿವು ಶಿವಪ್ಪ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಚಂದ್ರಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!