ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ನಡೆಯುತ್ತಿರುವ ಶತಮಾನೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ ಕೈವಾರ ಧರ್ಮದರ್ಶಿ ಜಯರಾಮ್ ಮಾತನಾಡಿದರು.
ಯಾವುದೇ ವ್ಯಕ್ತಿಯಾದರು ಸರಿ ಜನಿಸಿದ ಮೇಲೆ ತನ್ನನು ತಾನು ಗುರುವಿಗೆ ಸಮರ್ಪಿಸಿಕೊಳ್ಳದಿದ್ದರೆ ಅಥವಾ ಶರಣಾಗತನಾಗದಿದ್ದರೆ ಆತನಿಗೆ ಮುಕ್ತಿ ಹಾಗೂ ಜೀವನದ ಏಳಿಗೆಗಳೇ ಇರುವುದಿಲ್ಲ ಎಂಬ ಅಂಶವನ್ನು ಶಿರಡಿ ಸಾಯಿಬಾಬಾ ಬಲವಾಗಿ ನಂಬಿದ್ದರು ಮತ್ತು ಅದನ್ನೇ ಬೋದಿಸುತ್ತಿದ್ದರು. ದುರ್ಗುಣಗಳಿಗೆ ವಿಮುಖರಾಗಿ ಆತ್ಮ ಸಾಕ್ಷಾತ್ಕಾರಕ್ಕೆ ಮೊದಲಾಗಿ ಎಂಬುದೇ ಸಾಯಿಬಾಬ ತಮ್ಮ ಜೀವಿತಾವಧಿಯಲ್ಲಿ ಭಕ್ತರಿಗೆ ಕೊಡುತ್ತಿದ್ದ ಒಂದು ಮುಖ್ಯ ಉಪದೇಶ.
ಜಗತ್ತಿನಲ್ಲಿ ಸಾಕಷ್ಟು ಮಂದಿ ಅವಧೂತರಿದ್ದಾರೆ. ಅವರೆಲ್ಲರನ್ನು ಅನುಸರಿಸಲು ಆಗದಿದ್ದರೂ, ಕೆಲವರದ್ದಾದರೂ ಧ್ಯೇಯ ಹಾಗೂ ತತ್ವಗಳನ್ನು ಪಾಲಿಸಿದರೆ ಒಳಿತು ಎಂದು ಅವರು ತಿಳಿಸಿದರು.
ಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಒಂದು ಜಾತಿಗಾಗಲಿ ಅಥವಾ ಧರ್ಮಕ್ಕಾಗಲಿ ಬೆಲೆ ಕೊಟ್ಟವರಲ್ಲ. ಅವರು ಕೊಡುತ್ತಿದ್ದ ಬೆಲೆ ಒಂದೇ ಒಂದು ಧರ್ಮಕ್ಕೆ ಮಾತ್ರ. ಅದು ‘ಮನುಷ್ಯ’ ಧರ್ಮ. ಹೀಗಾಗಿ ಅವರ ವ್ಯಕ್ತಿತ್ವ ಧರ್ಮಾತೀತ ಹಾಗೂ ಜಾತ್ಯಾತೀತ. ಅವರು ಭಕ್ತರಿಗೆ ಬೋಧಿಸುತ್ತಿದ್ದ ಅಂಶಗಳು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ತತ್ವಗಳಿಂದ ಪಕ್ವವಾಗಿ ಮನುಕುಲದ ಏಳಿಗೆಗೆ ಮಾರ್ಗದರ್ಶಿಗಳಾಗಿದ್ದವು. ನಾವೀಗ ಅವನ್ನು ಪಾಲಿಸಿದರೆ ಸತ್ಪ್ರಜೆಗಳಾಗುತ್ತೇವೆ, ಸಮಾಜವೂ ಏಳಿಗೆಯಾಗುತ್ತದೆ ಎಂದರು.
ಬೆಂಗಳೂರಿನ ಸೃಷ್ಟಿ ಆರ್ಟ್ ಫೌಂಡೇಶನ್ನ ವೇದಾ ದೀಕ್ಷಿತ್ ವೆಲ್ಲಾಬ್ ಅವರ 20 ಮಂದಿ ಶಿಷ್ಯರು ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿದರು.
ಶ್ರೀ ಸಾಯಿನಾಥ ಜ್ಞಾನಮಂದಿರ ದೇವಾಲಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸೇವಾಕರ್ತರಾದ ಮೇಲೂರು ಎಸ್.ವಿ.ರಾಮಕೃಷ್ಣಪ್ಪ, ಕೆ.ಸೀತಾರಾಮರೆಡ್ಡಿ, ಎಂ.ಎನ್.ಗೋಪಾಲಪ್ಪ, ವೀಣಾದೇವಿ, ರತ್ನಮ್ಮ, ಪ್ರಮೀಳಾ, ದಿನದ ಪೂಜಾ ಸೇವಾಕರ್ತವಾದ ಎಸ್.ಎನ್.ಸುರೇಶ್, ನಾಗರತ್ನ, ಸನತ್ ಶ್ರೀನಾಥ್, ನಾಗಮಣಿ ಹಾಜರಿದ್ದರು.