ತಂದೆ ತಾಯಿಗಳು ಅನಕ್ಷರಸ್ಥರಾದರೂ ಸತತ ಅಧ್ಯಯನದಿಂದ ಸಾಧನೆ ಮಾಡಿದ ಕನ್ನಡದ ಕಟ್ಟಾಳು ದೇ.ಜವರೇಗೌಡರು ಒಬ್ಬ ಮೇರು ಸಾಹಿತಿಯಾಗಿ ಸುಮಾರು 400 ಗ್ರಂಥಗಳನ್ನು ರಚಿಸಿದ್ದಾರೆ. ಬದುಕು ಮತ್ತು ಬರಹ ಒಂದೇ ಆಗಿದ್ದಂಥಹ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಂಗಮಕೋಟೆ ಹೋಬಳಿ ಅಧ್ಯಕ್ಷ ಆರ್.ಎ.ಉಮೇಶ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿಯ ಕಛೇರಿಯಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನ ಜಂಗಮಕೋಟೆ ಹೋಬಳಿ ಘಟಕದ ವತಿಯಿಂದ ನಡೆದ ದೇ. ಜವರೇಗೌಡ ಮತ್ತು ಎಚ್.ವಿ.ರಾಮಚಂದ್ರರಾವ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ದೇ.ಜವರೇಗೌಡರ ಆತ್ಮಚರಿತ್ರೆ ‘ಹೋರಾಟದ ಬದುಕು’ ಪ್ರತಿಯೊಬ್ಬರೂ ಓದಬೇಕು. ವಿದ್ಯೆಗಾಗಿ ಅವರು ಪಟ್ಟ ಕಷ್ಟ, ತಪನೆ, ಆಸಕ್ತಿ, ಅಧ್ಯಯನ, ಶ್ರಮಜೀವನ, ಒಟ್ಟಾರೆ ಅವರ ಸಾಧನೆ ಪ್ರೇರಣದಾಯಕ. ಅವರ ಸಾಮರ್ಥ್ಯಕ್ಕೆ ಎಲ್ಲೆಗಳಿರಲಿಲ್ಲ. ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಹೋರಾಡಿದರು. ಇಳಿವಯಸ್ಸಿನಲ್ಲಿ ಕ್ಷೀಣಿಸುವ ಆರೋಗ್ಯವನ್ನು ಲೆಕ್ಕಿಸದೇ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಡಲು ಉಪವಾಸ ಸತ್ಯಾಗ್ರಹ ನಡೆಸಿದರು ಎಂದು ಹೇಳಿದರು.
ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಈಚೆಗೆ ನಿಧನರಾದ ಶಿಡ್ಲಘಟ್ಟ ಮೂಲದ ಸಾಹಿತಿ ಎಚ್.ವಿ.ರಾಮಚಂದ್ರರಾವ್ ಅವರ ಹಿಂದಿ ಮತ್ತು ಕನ್ನಡ ಅನುವಾದಗಳು, ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ರಚಿಸಿರುವ ಕೃತಿಗಳು, ತುಳಸಿ ರಾಮಾಯಣದ ಮೇಲೆ ಬರೆದ ‘ರಾಮಚರಿತ ಮಾನಸ ಒಂದು ರಸಯಾತ್ರೆ’, ಗ್ರಾಮಾಯಣ, ಸತ್ಯಾಗ್ರಹ ಮತ್ತು ಇತರ ಕಥೆಗಳು, ಕಬೀರ ವಚನಾವಳಿ, ಹರಿಕಥಾಮೃತಸಾರ ಮುಂತಾದ ಸಾಹಿತ್ಯ ರಚನೆಗಳ ಬಗ್ಗೆ ತಿಳಿಸಿದರು. ಅಗಲಿದ ಹಿರಿಯ ಚೇತನರ ಆತ್ಮಕ್ಕೆ ಶಾಂತಿಸಿಗಲಿ, ದುಃಖ ಭರಿಸುವ ಶಕ್ತಿ ಅವರ ಮನೆಯವರಿಗೆ ಭಗವಂತ ನೀಡಲಿ ಎಂದು ಹೇಳಿದರು.
ಸಾಹಿತಿಗಳಾದ ದೇ. ಜವರೇಗೌಡ ಮತ್ತು ಎಚ್.ವಿ.ರಾಮಚಂದ್ರರಾವ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕ.ಸಾ.ಪ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಪ್ರಧಾನ ಸಂಚಾಲಕ ಸುದರ್ಶನ್, ಸಹ ಸಂಚಾಲಕ ಸುಧೀರ್, ಗ್ರಾಮ ಪಂಚಾಯತಿ ಸದಸ್ಯ ರೂಪೇಶ್, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಧರ್ಮೇಂದ್ರ, ಕುಮಾರ್, ಆನಂದ್, ಎಸ್.ಆರ್.ವೆಂಕಟೇಶ್, ಶಿವಾನಂದ, ಚರಣ್, ಸುರೇಶ್, ಕೇಶವಮೂರ್ತಿ, ಪ್ರಭಾಕರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.