ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ವತಿಯಿಂದ ಡಿಸೆಂಬರ್ 12 ರಂದು “ಬೆಳಗಾವಿ ಚಲೋ” ಆಯೋಜಿಸಿದ್ದೇವೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಎನ್ಪಿಎಸ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಎನ್.ಗಜೇಂದ್ರ ತಿಳಿಸಿದರು.
ನಗರದಲ್ಲಿ ಸೋಮವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ನಾವು ಹಲವು ರೀತಿಯಲ್ಲಿ ಹಲವು ಬಾರಿ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಎಂದು ಹೋರಾಟ ನಡೆಸಿದ್ದೇವೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದಾದ್ಯಂತ ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ವತಿಯಿಂದ ೨೦,೨೫೪ ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿತ್ತು. ಮಾನ್ಯ ಮುಖ್ಯಮಂತ್ರಿಗಳು ಚುನಾವಣೆಯ ಮುನ್ನ ತಮ್ಮ ಪ್ರಣಾಳಿಕೆಯಲ್ಲಿ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದರು. ಕಳೆದ ಶೈಕ್ಷಣಿಕ ಸಮ್ಮೇಳನದ ವೇಳೆ ಮುಖ್ಯಮಂತ್ರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಆಶ್ವಾಸನೆ ನೀಡಿದ್ದಾರೆ.
ಆದರೆ ಈ ಬಗ್ಗೆ ಸಮಿತಿಯನ್ನು ರಚಿಸುವ ಬಗ್ಗೆ ಸುದ್ದಿ ತಿಳಿದು ಬಂದಿದೆ. ತಮಿಳುನಾಡಿನಲ್ಲಿ ಸಮಿತಿ ರಚಿಸಿ ಅದು ಉದ್ದೇಶ ಈಡೇರದೆ ವಿಫಲವಾಗಿದೆ. ಆದ್ದರಿಂದ ಈ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯದಾದ್ಯಂತ ಇರುವ ಎನ್ಪಿಎಸ್ ನೌಕರರೆಲ್ಲ ಬೆಳಗಾವಿಗೆ ಹೋಗುತ್ತಿದ್ದೇವೆ. ಎಲ್ಲೆಡೆ ಸ್ಥಳೀಯ ಶಾಸಕರಿಂದ ನಮ್ಮ ಬೆಂಬಲವಾಗಿ ಪತ್ರಗಳನ್ನು ಪಡೆದು ಬೆಳಗಾವಿಗೆ ಹೊರಟಿದ್ದು, ನಾವೂ ಸಹ ಶಾಸಕ ವಿ.ಮುನಿಯಪ್ಪ ಅವರಿಂದ ನಮ್ಮ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಪಡೆದಿದ್ದೇವೆ ಎಂದು ಹೇಳಿದರು.
ಡಿಸೆಂಬರ್ 11 ರಂದು ಶಿಡ್ಲಘಟ್ಟದಿಂದ ಸರ್ಕಾರಿ ಎನ್ಪಿಎಸ್ ನೌಕರರು ಬಸ್ ಗಳ ಮೂಲಕ ಬೆಳಗಾವಿಗೆ ಹೊರಟು ಡಿಸೆಂಬರ್ 12 ರಂದು ಅಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದೇವೆ. ಶಾಸಕರು ಸಹ ನಮ್ಮ ಬೆಂಬಲವಾಗಿ ಅಧಿವೇಶನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಎನ್.ಪಿ.ಎಸ್ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಎಸ್.ಎ.ನರಸಿಂಹರಾಜು, ಎ.ಎಂ.ವೀಣಾ, ಟಿ.ಟಿ.ನರಸಿಂಹಪ್ಪ, ಎಸ್. ಶಿವಶಂಕರ್, ಜನಾರ್ಧನ್ ಹಾಜರಿದ್ದರು.