ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಚಂದ್ರಾನಾಯಕ್ ಮಾತನಾಡಿದರು.
ನಮ್ಮ ನೆಲದ ಮೌಲ್ಯಗಳನ್ನು ಯುವ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಘನತೆ ಮತ್ತು ಸಂಸ್ಕೃತಿಯ ಬಗ್ಗೆ ಅರಿತಷ್ಟೂ ಮುಂದಿನ ಬದಿಕಿನ ಗುರಿ ಮತ್ತು ದಾರಿಯ ಕುರಿತು ಸ್ಪಷ್ಟತೆ ಸಿಗುತ್ತದೆ. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವ ಜನರ ಪಾತ್ರ ಮಹತ್ವದ್ದು ಎಂದು ಅವರು ತಿಳಿಸಿದರು.
ಮೌಲ್ಯಗಳ ಕುಸಿತದಿಂದ ಯುವ ಜನರಿಗೆ ಮುಂದಿನ ಗುರಿಯ ಬಗ್ಗೆ ಗೊಂದಲ ಮೂಡುತ್ತದೆ, ತಪ್ಪು ದಾರಿ ತುಳಿಯುವಂತಾಗುತ್ತದೆ. ಉತ್ತಮ ಸಂಸ್ಕಾರ, ಮೌಲ್ಯಗಳು, ಪುಸ್ತಕ ಜ್ಞಾನ ಬೆಳೆಸಿಕೊಂಡಲ್ಲಿ ಭವಿತವ್ಯವನ್ನು ರೂಪಿಸಿಕೊಳ್ಳಲು ಸುಲಭವಾಗುತ್ತದೆ ಎಂದು ಹೇಳಿದರು.
ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ.ವಿ.ವೆಂಕಟೇಶ್ ಮಾತನಾಡಿ, ಯುವಕರು ಶ್ರಮ ವಹಿಸಿದರೆ ಬಹಳಷ್ಟು ಎತ್ತರಕ್ಕೆ ಬೆಳೆಯಬಹುದು.ಇದಕ್ಕೆ ಸಾಧಿಸುವ ಛಲ ಮತ್ತು ಪರಿಶ್ರಮ ಇರಬೇಕು. ಪ್ರತಿಯೊಬ್ಬರಲ್ಲೂ ನಾಯಕತ್ವದ ಗುಣ ಇರುತ್ತದೆ ಅದನ್ನು ಸ್ವತಃ ಅವರೇ ಹೊರ ತೆಗೆಯಬೇಕು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜದ ತುಡುಯುವ ಮನಸ್ಸ ಇದ್ದಾಗ ಅಂತಹ ನಾಯಕತ್ವದ ಗುಣ ಹೊರ ಬರುತ್ತದೆ.ಅದನ್ನು ಸಮಾಜ ಗುರುತಿಸುತ್ತದೆ ಎಂದರು.
ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೆಂಕಟರವಣಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಶ್ರೀಹರಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮುರಳಿ ಆನಂದ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ರಾಮಚಂದ್ರಪ್ಪ ಹಾಜರಿದ್ದರು.