ತಾಲ್ಲೂಕಿನ ಹಿತ್ತಲಹಳ್ಳಿ ಬಳಿ ಸಾರಿಗೆ ಬಸ್ ಡಿಪೋ ನಿರ್ಮಿಸಲು ಗುರುತಿಸಿರುವ ಜಾಗದ ಬಳಿ ಸ್ವಚ್ಛತೆ ಮಾಡಲು ಗುರುವಾರ ಇಲಾಖೆಯ ಅಧಿಕಾರಿಗಳು ಬಂದಾಗ ಕೆಲ ಗ್ರಾಮಸ್ಥರು ಅದಕ್ಕೆ ಅಡ್ಡಿಪಡಿಸಿದರು.
‘ಇಲ್ಲಿ ನಮ್ಮ ಜಮೀನು, ಸ್ಮಶಾನಕ್ಕೆ ತೆರಳಲು ದಾರಿ ಇದೆ. ಅದನ್ನು ಹೊರತುಪಡಿಸಿ ಉಳಿದ ಜಾಗದಲ್ಲಿ ಡಿಪೋ ಕಾರ್ಯ ನಡೆಸಿ. ನಿಮ್ಮ ಕೆಲಸದಿಂದ ನಮ್ಮ ಹೊಲ, ಜಮೀನುಗಳಿಗೆ ಹೋಗುವ ದಾರಿ ಮುಚ್ಚಿಹೋಗಲಿದೆ’ ಎಂದು ಅಧಿಕಾರಿಗಳ ಮುಂದೆ ತಕರಾರು ತೆಗೆದಿದ್ದಾರೆ. ಡಿಪೋ ಆಗುವುದರಿಂದ ಆಗುವ ಅನುಕೂಲಗಳ ಬಗ್ಗೆ ಅಧಿಕಾರಿಗಳು ಸಾಕಷ್ಟು ವಿವರಿಸಿದರೂ ಪ್ರಯೋಜನವಾಗಲಿಲ್ಲ.
ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿಜಯ್ರೆಡ್ಡಿ, ಈ ಸ್ಥಳದ ಸರ್ವೆ ಕಾರ್ಯವನ್ನು ಮಾಡಿಸಿ ಡಿಪೋ ಸ್ಥಳ, ಜಮೀನುಗಳಿಗೆ ಹೋಗುವ ದಾರಿಗಳನ್ನು ಗುರುತಿಸಬೇಕು. ಆನಂತರ ಕಾಮಗಾರಿ ಪ್ರಾರಂಭಿಸಿ. ತಕರಾರು ತೆಗೆದವರು ತಮ್ಮ ದಾಖಲೆಗಳನ್ನು ಒದಗಿಸಿ ಎಂದು ಇಬ್ಬರನ್ನೂ ಸಮಾಧಾನಗೊಳಿಸಿದರು.
ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಮೇಲೂರು ಗಿರೀಶ್ ನಾಯಕ್, ಬೆಳ್ಳೂಟಿ ಆನಂದ್, ಟಿ.ಆನಂದ್, ನರಸಿಂಹಪ್ಪ, ಹಿತ್ತಲಹಳ್ಳಿ ಗಣೇಶ್, ಉಗ್ರಪ್ಪ ಹಾಜರಿದ್ದರು.