Home News ಸಾವಿತ್ರಿ ಬಾಪುಲೆ ಅವರ ಜನ್ಮದಿನಾಚರಣೆ ನೆನಪಿನಲ್ಲಿ ಶಿಕ್ಷಕಿಯರಿಗೆ ಸನ್ಮಾನ

ಸಾವಿತ್ರಿ ಬಾಪುಲೆ ಅವರ ಜನ್ಮದಿನಾಚರಣೆ ನೆನಪಿನಲ್ಲಿ ಶಿಕ್ಷಕಿಯರಿಗೆ ಸನ್ಮಾನ

0

ಸ್ವಾತಂತ್ರ ಪೂರ್ವದಲ್ಲಿ ಜಿಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯೊಳಗೆ ಮೌಢ್ಯತೆಗಳೇ ವಿಜೃಂಭಿಸುತ್ತಿದ್ದ ಸಂದರ್ಭದಲ್ಲಿ ಪರಿಸ್ಥಿತಿಯಲ್ಲಿ ಶೋಷಿತ, ದಲಿತ, ಹಿಂದುಳಿದ ವರ್ಗ ಸೇರಿದಂತೆ ಮಹಿಳೆಯರಿಗೆ ಅಕ್ಷರ ಕಲಿಸಿ ಶಿಕ್ಷಣ ನೀಡುವ ಮೂಲಕ ಹೊಸ ಕ್ರಾಂತಿಗೆ ನಾಂದಿಯಾಡಿದವರು ಮಹಾನ್ ತಾಯಿ ಸಾವಿತ್ರಿ ಬಾಪುಲೆ ಹಾಗೂ ಜ್ಯೋತಿಬಾಪುಲೆಯವರು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕಸಾಪ ತಾಲ್ಲೂಕು ಘಟಕದಿಂದ ಸಾವಿತ್ರಿ ಬಾಪುಲೆ ಅವರ ಜನ್ಮದಿನಾಚರಣೆ ನೆನಪಿನಲ್ಲಿ ಆಯೋಜಿಸಿದ್ದ ಶಾಲೆಗೊಂದು ಕನ್ನಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆ ತೆರೆದು ಶಿಕ್ಷಕಿಯಾಗಿ ದುಡಿದ ತಪ್ಪಿಗಾಗಿಯೇ ಸಾವಿತ್ರಿಬಾಯಿಪುಲೆ ಸೆಗಣಿ ಮತ್ತು ಕಲ್ಲೇಟು ತಿನ್ನುತ್ತಾರೆ. ಆದರೆ ಶಿಕ್ಷಣವನ್ನು ಅಕ್ಷರಾಭ್ಯಾಸಕ್ಕಿಂತ, ಸಾಮಾಜಿಕ, -ಸಾಂಸ್ಕೃತಿಕ ಬದಲಾವಣೆಗಾಗಿ ತಳಸಮುದಾಯದವರ ಮನಸ್ಸನ್ನು ಬೆಳಗಿಸುವಂತೆ ಮಾಡುವ ಮೂಲಭೂತ ಕೆಲಸವೆಂದೇ ನಂಬಿದ ಪುಲೆ ದಂಪತಿಗಳು ಯಾವುದಕ್ಕೂ ಹೆದರದೆ ಸವಾಲುಗಳನ್ನು ಎದುರಿಸುತ್ತಾರೆ. ಅವರು ಪ್ರತಿದಿನ ಹಳೆಯ ಸೀರೆಯನ್ನು ಉಟ್ಟು ಶಾಲೆಗೆ ಬರುತ್ತಿದ್ದರು. ನಂತರ ಮಲಿನಗೊಂಡ ಸೀರೆಯನ್ನು ಬದಲಾಯಿಸಿಕೊಳ್ಳುತ್ತಿದ್ದರು.
ಪುಲೆ ದಂಪತಿಯ ಹೆಚ್ಚುಗಾರಿಕೆ ಅವರು ತೆರೆದ ಶಾಲೆ ಮತ್ತು ಕಲಿಸಿದ ಅಕ್ಷರವಷ್ಟೇ ಅಲ್ಲ. ಅವರಿಗೆ ಸಾಮಾಜಿಕ ಜಾಗೃತಿ ಮುಖ್ಯವಾಗಿತ್ತು. ಹಾಗಾಗಿ ಪುಲೆ ದಂಪತಿ ಶಾಲೆ ಮತ್ತು ಕಲಿಕೆಯಿಂದಾಚೆಗೂ ವಿಸ್ತರಿಸಿಕೊಂಡರು. ಇದರ ಭಾಗವಾಗಿಯೇ ದಮನಿತರಿಗೆ ಶಾಲೆ ತೆರೆಯುವ ಜೊತೆಗೆ ವಿವಾಹಬಾಹಿರ ಗರ್ಭಿಣಿ ಮಹಿಳೆಯರಿಗೆ ಪುನರ್ವಸತಿ ಕೇಂದ್ರಗಳನ್ನೂ, ವಿವಾಹಬಾಹಿರ ಮಕ್ಕಳಿಗೆ ಶಿಶುಕೇಂದ್ರ ಗಳನ್ನೂ ಸ್ಥಾಪಿಸಿದರು. ವಿಧವಾ ಕೇಶಮುಂಡನವನ್ನು ಕ್ಷೌರಿಕರ ಸಂಘಟನೆಯ ಪ್ರತಿಭಟನೆ ಮೂಲಕ ವಿರೋಧಿಸಿದರು ಎಂದು ಹೇಳಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್‌.ವಿ.ನಾಗರಾಜರಾವ್‌, ಸಂಸ್ಕೃತ ಪಂಡಿತ ವೇಣುಗೋಪಾಲ ಕೃಷ್ಣಮಾಚಾರ್‌ ಮಾತನಾಡಿದರು.
ಕಸಾಪ ತಾಲ್ಲೂಕು ಘಟಕದಿಂದ ಶಿಕ್ಷಕಿಯರಾದ ವಿಜಯಲಕ್ಷ್ಮಿ, ಪ್ರೇಮಾ ಲೋಬೋ, ಕೆ.ಬೃಂದ, ಮೇಲೂರು ವಿದ್ಯಾ, ಕಾಕಚೊಕ್ಕಂಡಹಳ್ಳಿ ಸುಮಾ, ಅಪ್ಪೇಗೌಡನಹಳ್ಳಿ ವೆಂಕಟರತ್ನ, ಯಣ್ಣಂಗೂರು ಟಿ.ಕೆ.ಮಂಜುಳಮ್ಮ, ಹೊಸಪೇಟೆ ಜಿ.ಎನ್‌.ನೇತ್ರಾವತಿ ಅವರಿಗೆ ಸಾವಿತ್ರಿ ಬಾಪುಲೆ ಅವರ ಜನ್ಮದಿನಾಚರಣೆ ನೆನಪಿನಲ್ಲಿ ಪ್ರಶಸ್ತಿ ಪತ್ರ, ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಕಸಾಪ ತಾಲ್ಲೂಕು ಘಟಕದ ಉಪಾಧ್ಯಕ್ಷ ಚೌಡಸಂದ್ರ ಪಿ.ಈ.ಕರಗಪ್ಪ, ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಪ್ರಗತಿಪರ ರೈತರಾದ ಮಂಜುನಾಥ್‌, ಗಜೇಂದ್ರ, ಎಂ.ಬಿ.ರವಿ, ವಿಮರ್ಶಕ ಚಂದ್ರಶೇಖರ ಹಡಪದ್‌, ಮುಖ್ಯ ಶಿಕ್ಷಕ ಆಂಜನೇಯ, ಶಿಕ್ಷಕರಾದ ರವಿ, ಶ್ರೀನಿವಾಸ್‌, ಬೃಂದಾ, ಮಂಗಳಾಬಾಯಿ, ಪ್ರಭಾಕರ, ಸುಮಿತ್ರಾ, ಬಯ್ಯಪ್ಪರೆಡ್ಡಿ, ಸುಮಾ ಮತ್ತಿತರರು ಹಾಜರಿದ್ದರು.

error: Content is protected !!