ಹಲವು ದಶಕಗಳ ಬಳಿಕ ಮರೆತದ್ದು ನೆನಪಿಸಿಕೊಳ್ಳುವಂತೆ ರೈತರು ಸಿರಿಧಾನ್ಯಗಳನ್ನು ಬಿತ್ತನೆ ಮಾಡಿದ್ದು, ಇತ್ತಿಚೆಗೆ ಬಿದ್ದ ಮಳೆಯಿಂದ ಬೆಳೆಗಳು ಉತ್ತಮವಾಗಿ ಬೆಳೆದು ನಿಂತಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಹಲವು ವರ್ಷಗಳಿಂದ ಸಿರಿಧಾನ್ಯಗಳನ್ನು ಬೆಳೆಯುವ ಪದ್ಧತಿಯನ್ನು ರೈತರು ಬಿಟ್ಟಿದ್ದರು. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ತಮ್ಮ ಆಸಕ್ತಿಯಿಂದ ಬೆಳೆದುಕೊಳ್ಳುತ್ತಿದ್ದರು. ಬಯಲು ಭಾಗದಲ್ಲಿನ ರೈತರು ರಾಗಿ, ಮುಸುಕಿನಜೋಳ, ಮುಂತಾದ ಬೆಳೆಗಳಿಗೆ ಮಾತ್ರ ಸೀಮಿತವಾಗಿದ್ದರು. ಕೃಷಿ ಕ್ಷೇತ್ರೋತ್ಸವದಂತಹ ಕಾರ್ಯಕ್ರಮಗಳ ಮೂಲಕ ರೈತರಿಗೆ ಸಿರಿಧಾನ್ಯಗಳಾದ ಸಾಮೆ, ಸಜ್ಜೆ, ಆರ್ಕ, ನವಣೆ, ಮುಂತಾದ ಬೆಳೆಗಳ ಕುರಿತು ಮೂಡಿಸಿದ್ದ ಜಾಗೃತಿಯ ಫಲವಾಗಿ ರೈತರು ತಮ್ಮ ಹೊಲಗಳಲ್ಲಿ ಸಿರಿಧಾನ್ಯಗಳನ್ನು ಬಿತ್ತನೆ ಮಾಡಿದ್ದು, ಬೆಳೆಗಳು ಈಗ ಕಾಳುಕಚ್ಚುತ್ತಿವೆ.
ಈ ಕುರಿತು ಮಾತನಾಡಿದ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ, ನಮ್ಮಲ್ಲಿ ಹಿಂದೆ ಹೊಲಗಳಲ್ಲಿ ಸಾಮೆ, ನವಣೆ, ಸಜ್ಜೆ, ಜವಾರಿ ಜೋಳ, ಎಲ್ಲಾ ಬೆಳೆಯುತ್ತಿದ್ವಿ, ಬರ್ತಾ ಬರ್ತಾ ಅವನ್ನೆಲ್ಲಾ ಬಿಟ್ಟು ಬರೀ ರಾಗಿ, ಅವರೆ, ಅಲಸಂಧಿ, ಹುರುಳಿ ಮಾತ್ರ ಬೆಳೆಯುತ್ತಿದ್ದಾರೆ, ಸಾಮೆ, ಸಜ್ಜೆ, ಇವೆಲ್ಲವುಗಳಿಂದ ನಾವು ಅನ್ನ ಮಾಡಿಕೊಂಡು ತಿನ್ನುತ್ತಿದ್ದೆವು, ತುಂಬಾ ಶಕ್ತಿ ಇರುತ್ತಿತ್ತು, ನಾವು ಬೇಸಾಯಗಳನ್ನು ಬಳಕೆ ಮಾಡುತ್ತಿರಲಿಲ್ಲ, ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆಗಳು ಬೆಳೆಯುತ್ತಿದ್ವಿ, ಈಗ ಯಾರು ಬೆಳೆಯೊಲ್ಲ, ಈ ವರ್ಷ ಹೊಲಗಳಲ್ಲಿ ಸಜ್ಜೆ, ಸಾಮೆ, ಕೆಲವೆಡೆ ಕಾಣಿಸ್ತಿವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲೂ ಆಹಾರದ ಪದ್ಧತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಸಿರಿಧಾನ್ಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಮಳೆಯ ಕೊರತೆಯು ಇದಕ್ಕೆ ಒಂದು ಕಾರಣವಾಗಿದೆ. ಮಳೆಯಾಶ್ರಿತ ಬೇಸಾಯ ಲಾಭದಾಯಿಕವಾಗಿ ಉಳಿಯಲಿಲ್ಲ. ಇದರಿಂದ ರೈತರು ರಾಗಿ ಹೊರತುಪಡಿಸಿ ಇತರ ಸಿರಿ ಧಾನ್ಯ ಬೆಳೆಯುವುದನ್ನು ಕೈಬಿಟ್ಟಿದ್ದರು.
ಇತ್ತಿಚಿನ ದಿನಗಳಲ್ಲಿ ಮತ್ತೆ ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಉತ್ತಮ ಆರೋಗ್ಯವನ್ನು ನೀಡುತ್ತದೆ ಎನ್ನುವುದು ಒಂದು ಕಾರಣವಾದರೆ ಕಡಿಮೆ ಖರ್ಚಿನ ಬೆಳೆ ಎಂದು ಸಿರಿಧಾನ್ಯಗಳನ್ನು ಬೆಳೆಯಲು ರೈತರು ಮನಸ್ಸು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇವುಗಳಿಗೆ ಉತ್ತಮ ಬೆಳೆಯು ಸಿಗಲಿದೆ.
ಬೋದಗೂರು ವೆಂಕಟಸ್ವಾಮಿರೆಡ್ಡಿ ಅವರು ತಮ್ಮ ಹೊಲದಲ್ಲಿ ಸಿರಿಧಾನ್ಯಗಳಾದ ಅರ್ಕ, ಸಾಮೆ, ನವಣೆ, ಊದಲು, ಬರುಗು, ಸಜ್ಜೆ, ಕೂರಲೆ, ಜೋಳ ಬೆಳೆದಿದ್ದಾರೆ. ಪ್ರತಿ ವರ್ಷ ಸಿರಿಧಾನ್ಯಗಳನ್ನು ಬೆಳೆಯುವ ಅವರಿಗೆ ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆಯಿದೆ. ಅವರಿಂದ ಬೀಜ ಪಡೆದಿರುವ ಇತರ ರೈತರು ಸುಮಾರು 6 ಎಕರೆಯಷ್ಟು ಸಿರಿಧಾನ್ಯಗಳನ್ನು ಬೆಳೆದಿದ್ದಾರೆ.
ರಕ್ತದ ಒತ್ತಡ, ಸಕ್ಕರೆ ಕಾಯಿಲೆಗೆ ತುತ್ತಾದವರು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸುತ್ತಾರೆ. ಈ ಧಾನ್ಯಗಳಿಂದ ಉತ್ತಮವಾದ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ವೈದ್ಯರು ಹೇಳುತ್ತಾರೆ.
ಹಳ್ಳಿಗಳಲ್ಲಿ ಹೆಚ್ಚು ಬಳಕೆ: ಹಳ್ಳಿಗಳಲ್ಲಿ ಅರೆಸಾಮೆ ಬೇಯಿಸಿ ಒಣಗಿಸಿ ಕುಟ್ಟಿ ಅಕ್ಕಿ ಮಾಡುತ್ತಿದ್ದರು. ಮುದ್ದೆ ತಯಾರಿಕೆಯಲ್ಲಿ ನುಚ್ಚಿನಂತೆ ಬಳಸುತ್ತಿದ್ದರು. ಇನ್ನು ಹಾಲು ಸಾಮೆ, ಕರಿಸಾಮೆ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಗೊಜ್ಜು ಅಥವಾ ಮಜ್ಜಿಗೆ ಜೊತೆ ಸವಿಯುವುದು ಎಂದರೆ ಗ್ರಾಮೀಣ ಭಾಗದಲ್ಲಿನ ಜನರಿಗೆ ಎಲ್ಲಿಲ್ಲದ ಪ್ರೀತಿ. ನವಣೆ ಬಳಸಿ ತಯಾರಿಸುವ ಗಿಣ್ಣಿನ ರುಚಿ ನಾಲಗೆಯಲ್ಲಿ ನೀರು ಜಿನುಗಿಸುತ್ತದೆ. ಹಿಂದೆ ಸಜ್ಜೆಯನ್ನು ಕುಟ್ಟಿ ರಾಗಿ ಮುದ್ದೆ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತಿತ್ತು.