ಎ.ಪಿ.ಎಂ.ಸಿ.ಚುನಾವಣೆಯಲ್ಲಿ ಸೋಲಿನ ಭಯದಿಂದ ಜೆಡಿಎಸ್ ಪಕ್ಷದವರು ಹಿಂದೆ ಸರಿದಿದ್ದಾರೆಯೆ ಹೊರತು ಅವರಿಗೆ ಎಲ್ಲಿಯೂ ಅನ್ಯಾಯವಾಗಿಲ್ಲವೆಂದು ಮಾಜಿ ಶಾಸಕ ವಿ.ಮುನಿಯಪ್ಪ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೨ ವರ್ಷಗಳಿಂದ ಎ.ಪಿ.ಎಂ.ಸಿ.ಗೆ ಚುನಾವಣೆ ನಡೆದಿರಲಿಲ್ಲ, ನ್ಯಾಯಾಲಯವು ಜನವರಿ ೨೫ ರೊಳಗೆ ಚುನಾವಣೆಗಳನ್ನು ನಡೆಸಿ ವರದಿ ಒಪ್ಪಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಚುನಾವಣೆಗೆ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆಗಳನ್ನು ನಿಯಮಾನುಸಾರ ಮುಕ್ತಾಯಗೊಳಿಸುವಂತಹ ಸಂಪೂರ್ಣ ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿರುವ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸಿ ಎಲ್ಲಾ ಪ್ರಕ್ರಿಯೆಗಳನ್ನು ಮುಕ್ತಾಯ ಮಾಡಿದ್ದಾರೆ.
ಸರ್ಕಾರ ನಮ್ಮದಿದ್ದರೂ ನಾವು ಚುನಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಕಳೆದ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಹಿನ್ನಡೆಯಾದರೂ ಒಪ್ಪಿಕೊಂಡಿದ್ದೇವೆ. ಈಗ ಹಸ್ತಕ್ಷೇಪ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬೇಕಾದಂತಹ ಅನಿವಾರ್ಯತೆ ನಮಗಿಲ್ಲ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದ್ದರೆ ಅದಕ್ಕೆ ಅಧಿಕಾರಿಗಳು ಹೊಣೆಯಾಗುತ್ತಾರೆಯೆ ಹೊರತು ನಮಗೂ ಅದಕ್ಕೂ ಸಂಬಂಧವಿಲ್ಲ. ಎ.ಪಿ.ಎಂ.ಸಿ.ನಲ್ಲಿ ಇದುವರೆಗೂ ಆಡಳಿತಾಧಿಕಾರಿ ಇರುವುದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿತ್ತು. ಆದ್ದರಿಂದ ನಾವು ನ್ಯಾಯಾಲಯದ ಮೊರೆ ಹೋಗಿ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿವರಿಸಿದ್ದೇವು. ಇದರಿಂದ ಚುನಾವಣೆ ಮಾಡಲು ಆಯೋಗ ಮುಂದಾಗಿದೆ.
ಮತದಾರರ ಪಟ್ಟಿಯ ಬಗ್ಗೆ ಯಾರದಾದರೂ ತಕರಾರು ಇದ್ದರೆ ಅರ್ಜಿಸಲ್ಲಿಸಲು ಅವಕಾಶ ನೀಡುತ್ತಾರೆ. ಸಮಯಾವಕಾಶ ಮುಕ್ತಾಯವಾಗುವವರೆಗೂ ಅಭ್ಯರ್ಥಿಗಳಾಗಲಿ, ರೈತರಾಗಲಿ ತರಾಕರು ಅರ್ಜಿ ಹಾಕಿಲ್ಲ. ಚುನಾವಣೆಗೆ ಅಧಿಸೂಚನೆ ಹೊರಡಿಸಿದ ನಂತರ ಜೆಡಿಎಸ್ ನವರು ಎಲ್ಲಾ ಪ್ರಕ್ರಿಯೆಗಳಲ್ಲಿ ಭಾಗವಹಿಸಿದ್ದಾರೆ. ಚುನಾವಣೆ ಕೇವಲ ಒಂದು ದಿನ ಬಾಕಿ ಇರುವಾಗ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿಕೆ ನೀಡಿರುವುದು ರೈತರ ಹಿತಕ್ಕಿಂತ ರಾಜಕೀಯ ಹಿತಾಸಕ್ತಿ ಹೆಚ್ಚಾಗಿರುವುದು ಕಂಡು ಬರುತ್ತದೆ.
ಜೆಡಿಎಸ್ ಪಕ್ಷದಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವವರು ಯಾವುದೇ ಕ್ಷೇತ್ರದ ಅಭ್ಯರ್ಥಿಯಲ್ಲ. ಯಾರು ರೈತರ ಪರವಾಗಿದ್ದಾರೆ. ಯಾರು ರೈತರ ವಿರೋಧಿಗಳು ಎಂಬುದನ್ನು ರೈತರೇ ನಿರ್ಧರಿಸಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ತಾಲ್ಲೂಕು ಪಂಚಾಯಿತಿ ಸದಸ್ಯ ನರಸಿಂಹಪ್ಪ, ಎಸ್.ಎಂ.ನಾರಾಯಣಸ್ವಾಮಿ, ಲಗಿನಾಯಕನಹಳ್ಳಿ ಮುನಿಯಪ್ಪ, ಗಂಗನಹಳ್ಳಿ ಬಿ.ಸಿ.ವೆಂಕಟೇಶಪ್ಪ, ಮಳ್ಳೂರು ನಾಗರಾಜ್, ಮುತ್ತೂರು ಚಂದ್ರೇಗೌಡ, ಎಲ್.ಮಧು, ದೇವರಾಜು ಮುಂತಾದವರು ಹಾಜರಿದ್ದರು.