Home News ಸ್ವಚ್ಛತೆಯಿಲ್ಲದೆ ಖಾಯಿಲೆಗಳು ಹರಡುತ್ತಿದೆ ತುಮ್ಮನಹಳ್ಳಿ ಗ್ರಾಮದಲ್ಲಿ

ಸ್ವಚ್ಛತೆಯಿಲ್ಲದೆ ಖಾಯಿಲೆಗಳು ಹರಡುತ್ತಿದೆ ತುಮ್ಮನಹಳ್ಳಿ ಗ್ರಾಮದಲ್ಲಿ

0

ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದಲ್ಲಿ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದು, ಇಡೀ ಗ್ರಾಮದ ಜನತೆ ವಿವಿಧ ರೀತಿಯ ಖಾಯಿಲೆಗಳಿಗೆ ತುತ್ತಾಗುವ ಭೀತಿಯಲ್ಲಿದ್ದಾರೆ.
ಗ್ರಾಮದಲ್ಲಿರುವ ರಸ್ತೆಗಳಲ್ಲಿ ಕುಡಿಯುವ ನೀರಿನ ಪೈಪುಗಳು ಒಡೆದು ಹೋಗಿರುವುದರಿಂದ ರಸ್ತೆಯಲ್ಲಿ ನಿರಂತರವಾಗಿ ಹರಿಯುತ್ತಿರುವ ನೀರು ಒಂದೆಡೆಯಾದರೆ, ಮತ್ತೊಂದು ಕಡೆ ಬಳಸಿದ ನೀರು ಹರಿಯಲು ನಿರ್ಮಿಸಿರುವ ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿರುವುದರಿಂದ ನೀರು ಸರಾಗವಾಗಿ ಹರಿಯದೇ ನಿಂತಲ್ಲೇ ನಿಲ್ಲುವುದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗು ಪ್ರೌಡಶಾಲೆಗೆ ಹೋಗುವ ಮುಖ್ಯರಸ್ತೆಯಲ್ಲಿಯೇ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳಲ್ಲಿ ಬಳಸಿದ ನೀರು ರಸ್ತೆಯ ಮಧ್ಯೆ ಹರಿಯುತ್ತಿದೆ. ಈ ಕೊಳಚೆ ನೀರಿನಲ್ಲಿಯೇ ಪ್ರತಿನಿತ್ಯ ನೂರಾರು ಶಾಲಾ ಮಕ್ಕಳು ನಡೆದಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಮೂಡಿದೆ.
ಗ್ರಾಮದ ದಲಿತ ಕಾಲೋನಿಯಲ್ಲಿ ಯಾವುದೇ ಸ್ವಚ್ಚತೆ ಕಾರ್ಯ ಮಾಡಲು ಮುಂದಾಗದ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯ ಒಂದೆಡೆಯಾದರೆ ಸ್ಥಳೀಯ ಜನರು ವಾಸಿಸುವ ಸ್ಥಳದಲ್ಲಿ ಸಣ್ಣ ಪುಟ್ಟ ಚರಂಡಿಗಳಿಗೂ ಅಡ್ಡಲಾಗಿ ಕಲ್ಲುಗಳನ್ನು ಹಾಕಿಕೊಂಡಿರುವುದರಿಂದ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವುದಿಲ್ಲ. ಇದರಿಂದ ವಿಪರೀತ ವಾಸನೆ ಸೇರಿದಂತೆ ಸೊಳ್ಳೆಗಳ ಕಾಟದಿಂದ ಕಾಲೋನಿಯ ಸುಮಾರು ನಾಲ್ಕೈದು ಮಕ್ಕಳು ಅನಾರೋಗ್ಯದಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
ನಿರಂತರವಾಗಿ ವಿವಿಧ ರೀತಿಯ ಜ್ವರ ಹಾಗು ಖಾಯಿಲೆಗಳಿಂದ ಗ್ರಾಮದ ಬಹುತೇಕ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗ್ರಾಮದ ದಲಿತ ಕಾಲೋನಿ ಹಾಗು ಶಾಲೆಯ ಮುಂಭಾಗದಲ್ಲಿರುವ ಚರಂಡಿ ಸ್ವಚ್ಚಗೊಳಿಸುವಂತೆ ಗ್ರಾಮ ಪಂಚಾಯತಿಗೆ ಅರ್ಜಿ ನೀಡಿ ಮೂರು ತಿಂಗಳು ಕಳೆದರೂ ಈವರೆಗೂ ಸ್ವಚ್ಚಗೊಳಿಸಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

error: Content is protected !!