ಸಮಾಜದಲ್ಲಿ ಅಡಗಿರುವ ಜಾತೀಯತೆ, ಅಮಾನವೀಯ ಆಚರಣೆಗಳು, ಅರ್ಥಹೀನ ಕಂದಾಚಾರಗಳನ್ನು ತೊಡೆದುಹಾಕಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕಾದಂತಹ ಅನಿವಾರ್ಯತೆಯಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಾಂಸ್ಕೃತಿಕ ಸಂಚಾಲಕ ಸಿ.ಎಂ.ಮುನಯ್ಯ ತಿಳಿದಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಸಾರ್ವಜನಿಕ ಸ್ಮಶಾನದಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೫೯ ನೇ ಮಹಾಪರಿನಿರ್ವಾಣ ದಿನ ಹಾಗೂ ಪರಿವರ್ತನಾ ದಿನಾಚರಣೆ ಅಂಗವಾಗಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ‘ರುದ್ರಭೂಮಿಯಲ್ಲಿ ದಾಸೋಹ – ಮೌಡ್ಯಾಚರಣೆಯ ವಿರುದ್ದ ಪರಿವರ್ತನೆಯ ಕಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಸಮುದಾಯಕ್ಕೆ ಮಾರಕವೆನಿಸುವ ಶೋಷಣೆ ಮತ್ತು ಹಿಂಸೆಗೆ ಕಾರಣವಾಗುವ ಮೌಢ್ಯಾಚರಣೆಗಳನ್ನು ಯಾವುದೇ ನಾಗರಿಕ ಸಮಾಜ ಒಪ್ಪಿಕೊಳ್ಳಬಾರದು. ಈಗಾಗಲೇ ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಇಂತಹ ಪ್ರಯತ್ನಗಳು ನಡೆದಿತ್ತು. ರಾಜ್ಯ ಸರ್ಕಾರ ಈ ಹಿಂದೆ ಮೌಡ್ಯಾಚರಣೆ ನಿಷೇದ ಕಾಯಿದೆ ಜಾರಿಗೆ ತರಲು ಯತ್ನಿಸಿತ್ತಾದರೂ ಕೆಲವು ಮೂಲಭೂತವಾದಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಈ ಮಸೂದೆಯ ಬಗ್ಗೆ ವಿವಾದ ಎಬ್ಬಿಸಿದ್ದರಿಂದ ಕಾಯಿದೆ ಜಾರಿಯಾಗದೇ ಮುಂದೂಡಲ್ಪಟ್ಟಿತು. ಕೂಡಲೇ ರಾಜ್ಯ ಸರ್ಕಾರ ಮೌಢ್ಯಾಚರಣೆ ನಿಷೇಧ ಕಾಯಿದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ದ.ಸಂ.ಸ ತಾಲ್ಲೂಕು ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೬೯ ವರ್ಷಗಳು ಕಳೆದರೂ ಕೂಡಾ ಇಂದಿಗೂ ತಮಗೆ ಸಿಗಬೇಕಾದಂತಹ ಸೌಲಭ್ಯಗಳಿಗಾಗಿ ದಲಿತರು ನಿರಂತರವಾಗಿ ಹೋರಾಟಗಳನ್ನು ನಡೆಸಬೇಕಾಗಿರುವಂತಹ ದುಸ್ಥಿತಿ ಬಂದಿದೆ. ಜೀವವಿರೋಧಿ ಮೌಡ್ಯಗಳು, ಕಂದಾಚಾರಗಳು, ಅಮಾನವೀಯ ಆಚರಣೆಗಳನ್ನು ಜನರ ಮೇಲೆ ನಿರಂತರವಾಗಿ ಹೇರುವಂತಹ ಪುರೋಹಿತಶಾಹಿ ಶಕ್ತಿಗಳು ಸಾವಿರಾರು ವರ್ಷಗಳಿಂದ ದಲಿತ ಸಮುದಾಯಗಳನ್ನು ಮತ್ತು ಮಹಿಳೆಯರನ್ನು ಶೋಷಣೆಗೆ ಒಳಪಡಿಸುತ್ತಾ ಬಂದಿದ್ದು ಇಂತಹ ಮೌಢ್ಯತೆಯ ಸಮಾಜ ಪರಿವರ್ತನೆಯಾಗದಿದ್ದರೆ ಮಾನವಕುಲಕ್ಕೆ ಉಳಿಗಾಲವಿಲ್ಲವೆಂದರು.
ದಲಿತ ಸಮುದಾಯವನ್ನು ಶೋಷಣೆಗೆ ಒಳಪಡಿಸಿ, ನಿರಂತರವಾಗಿ ದಬ್ಬಾಳಿಕೆ ನಡೆಸುವುದರೊಂದಿಗೆ ಸಂಪತ್ತು, ಅಧಿಕಾರ, ವಿದ್ಯೆ ಮತ್ತು ಅವಕಾಶಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಸಮಾಜದಲ್ಲಿನ ಶ್ರೇಣಿಕೃತ ಜಾತಿ ವ್ಯವಸ್ಥೆಯ ವಿಷಬೀಜವನ್ನು ಬಿತ್ತುತ್ತಿದ್ದ ಪುರೋಹಿತಶಾಹಿಗಳ ಕುತಂತ್ರದಿಂದ ದಲಿತರನ್ನು ಮೌಢ್ಯತೆಯ ಗುಲಾಮಗಿರಿಯಿಂದ ಮುಕ್ತಗೊಳಿಸಲು ಡಾ.ಬಿ.ಆರ್.ಅಂಬೇಡ್ಕರ್ ಶ್ರಮಿಸಿದ್ದಾರೆ. ಅವರ ಕನಸು ನನಸು ಮಾಡುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ದಲಿತರಲ್ಲಿ ಹಾಗೂ ಸಂಘಟಕರಲ್ಲಿ ಬರಬೇಕು ಎಂದರು.
ತಾಲ್ಲೂಕು ಸಂಘಟನಾ ಸಂಚಾಲಕರಾದ ಟಿ.ಎ.ಚಲಪತಿ, ಲಕ್ಷ್ಮೀನಾರಾಯಣ, ಹುಜುಗೂರು ವೆಂಕಟೇಶ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.