Home News ಹುಂಡಿ ಹಣ ತೆಗೆಯಲು ಗ್ರಾಮಸ್ಥರ ವಿರೋಧ

ಹುಂಡಿ ಹಣ ತೆಗೆಯಲು ಗ್ರಾಮಸ್ಥರ ವಿರೋಧ

0

ತಾಲ್ಲೂಕಿನ ಮೇಲೂರು ಗ್ರಾಮದ ಗಂಗಾದೇವಿ ದೇವಾಲಯದಲ್ಲಿ ಹುಂಡಿ ಹಣ ತೆಗೆಯಲು ಹೋದ ತಾಲ್ಲೂಕು ಆಡಳಿತ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದು, ತಹಶೀಲ್ದಾರ್ ಮತ್ತು ಅಧಿಕಾರಿಗಳು ಹಿಂದಿರುಗಿದ ಘಟನೆ ಬುಧವಾರ ನಡೆದಿದೆ.
ಪುರಾಣ ಪ್ರಸಿದ್ಧ ಗಂಗಾದೇವಿಯ ಜಾತ್ರಾ ಮಹೋತ್ಸವ, ಕರಗ, ಅನ್ನಸಂತರ್ಪಣೆ ಮುಂತಾದವು ಜಿಲ್ಲೆಗೇ ಪ್ರಸಿದ್ಧವಾಗಿದೆ. ಈ ದೇವಿಯ ಭಕ್ತವೃಂದ ಸಾಕಷ್ಟಿದ್ದು, ಪ್ರತೀ ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ನಡೆಯುವ ವಿಶೇಷ ಪೂಜೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅನ್ನದಾನವೂ ನಡೆಯುತ್ತದೆ.
ಸಾಕಷ್ಟು ಹುಂಡಿ ಹಣ ಈ ದೇಗುಲದಲ್ಲಿ ಶೇಖರಣೆಯಾಗುತ್ತದೆ. ಈ ದೇವಾಲಯ ಮುರಾಯಿ ಇಲಾಖೆಗೆ ಸೇರಿ ವರ್ಷ ಕಳೆದಿದೆ. ಆದರೆ ಕಳೆದ ವರ್ಷ ಅಧಿಕಾರಿಗಳು ಬಂದು ಹಣವನ್ನು ತೆಗೆದುಕೊಂಡು ಹೋದರು, ಅಭಿವೃದ್ಧಿ ಕಾರ್ಯ ನಡೆಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ದೇವಸ್ಥಾನದಲ್ಲಿ ನಡೆಯುವ ರಥೋತ್ಸವ, ಜಾತ್ರೆಯನ್ನು ಅಧಿಕಾರಿಗಳು ಈ ಬಾರಿ ಯಾವುದೇ ರೀತಿಯಲ್ಲೂ ನಿರ್ವಹಣೆ ಮಾಡಿಲ್ಲ. ಗ್ರಾಮಸ್ಥರು ಮತ್ತು ಭಕ್ತರು ಸೇರಿ ವಿಜೃಂಭಣೆಯಿಂದ ನಡೆಸಿದರು. ಅಧಿಕಾರಿಗಳ ನಿರ್ವಹಣೆಯಿಲ್ಲದೆ ಈ ಬಾರಿ ರಥಸಪ್ತಮಿ ಪೂಜೆ ನಿಲ್ಲುವಂತಾಯಿತು. ಕಳೆದ ಬಾರಿ ಹುಂಡಿಯಿಂದ ಸುಮಾರು ಎರಡು ಲಕ್ಷ ಎಪ್ಪತ್ತೈದು ಸಾವಿರ ರೂಗಳು ಮತ್ತು ದೇವರಿಗೆ ಅರ್ಪಿಸಿರುವ ಸೀರೆಗಳ ಹರಾಜಿನಿಂದ 38 ಸಾವಿರ ರೂಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು. ಇದರ ಜೊತೆಯಲ್ಲಿ ಬ್ಯಾಂಕಿನಲ್ಲಿ ನಿತ್ಯಪೂಜೆಗೆಂದು ಭಕ್ತರು ಕೊಟ್ಟ ಹಣವೂ ಮುಜರಾಯಿಗೆ ಸೇರಿತು.
ಆದರೆ ಈಗ ನಿತ್ಯ ಪೂಜೆಯೂ ನಿಂತಿದೆ, ವಿಶೇಷ ಪೂಜೆಗಳೂ ನಿಂತಿವೆ. ಕೇವಲ ಹಣ ತೆಗೆದುಕೊಂಡು ಹೋಗಲು ಮಾತ್ರ ಅಧಿಕಾರಿಗಳು ಬರುತ್ತಾರೆ. ದೇವಸ್ಥಾನದ ಆಗುಹೋಗುಗಳು, ಪೂಜೆ ಪುನಸ್ಕಾರಗಳು, ಅಭಿವೃದ್ಧಿ ಯಾವುದಕ್ಕೂ ತಲೆಹಾಕುವುದಿಲ್ಲ. ನಮ್ಮ ಗ್ರಾಮದೇವತೆಯ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸುತ್ತೇವೆ. ಈ ಮೊದಲಿದ್ದಂತೆ ಟ್ರಸ್ಟ್ ಜವಾಬ್ದಾರಿಗೆ ಬಿಟ್ಟುಬಿಡಿ. ಸುಸೂತ್ರವಾಗಿ ನಾವು ನಡೆಸಿಕೊಂಡು ಹೋಗುತ್ತೇವೆ. ನೀವು ಅಧಿಕಾರ ವಹಿಸಿಕೊಂಡಾಗಿನಿಂದ ಈ ದೇಗುಲದ ಅಭಿವೃದ್ಧಿ, ಪೂಜೆಯ ಬಗ್ಗೆ ಏನೂ ಕ್ರಮ ಕೈಗೊಳ್ಳದೆ, ದೇವಾಲಯಕ್ಕೆ ಮುಜರಾಯಿ ಸಮಿತಿ ಕೂಡ ರಚಿಸದೆ ಈಗ ಹುಂಡಿ ಹಣಕ್ಕೆ ಹೇಗೆ ಬಂದಿದ್ದೀರಿ ಎಂದು ಗ್ರಾಮಸ್ಥರು ತಹಶೀಲ್ದಾರ್ ಮನೋರಮಾ ಹಾಗೂ ಡಿ.ಟಿ.ಒ ರಾಮಕೃಷ್ಣಪ್ಪ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದರು.
ಗ್ರಾಮಸ್ಥರ ಆಕ್ರೋಷಕ್ಕೆ ಉತ್ತರಿಸಲಾಗದೇ ತಹಶೀಲ್ದಾರ್ ಮತ್ತು ಅಧಿಕಾರಿಗಳ ತಂಡ ಹಿಂದಿರುಗಿದರು.
ಗ್ರಾಮಾಂತರ ಸಬ್ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ, ಗ್ರಾಮದ ಮುಖಂಡರಾದ ರಾಮಕೃಷ್ಣಪ್ಪ, ಆರ್.ಎ.ಉಮೇಶ್, ಬಿ.ಎಮ್.ಶ್ರೀನಿವಾಸರೆಡ್ಡಿ, ಕೆ.ಮಂಜುನಾಥ್, ಎಚ್.ಟಿ.ನಾರಾಯಣಸ್ವಾಮಿ, ಧರ್ಮೇಂದ್ರ, ಸುದರ್ಶನ್, ಸುಧೀರ್, ಎಂ.ಡಿ. ನಾರಾಯಣಸ್ವಾಮಿ, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!