Home News ಹೊಸ ರೈಲಿಗೆ ಸ್ವಾಗತ

ಹೊಸ ರೈಲಿಗೆ ಸ್ವಾಗತ

0

ಕೋಲಾರ ಮಾರ್ಗವಾಗಿ ಶಿಡ್ಲಘಟ್ಟ ಮೂಲಕ ಯಲಹಂಕ ಹಾಗೂ ವೈಟ್ ಫೀಲ್ಡ್ ಗೆ ಹೊಸ ರೈಲು ಸಂಚಾರ ಆರಂಭಗೊಂಡಿದ್ದು, ಸೋಮವಾರ ಬೆಳಗ್ಗೆ ಶಿಡ್ಲಘಟ್ಟಕ್ಕೆ ಆಗಮಿಸಿದಾಗ ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರು ರೈಲಿಗೆ ಹಾರ ಹಾಕಿ ಸ್ವಾಗತಿಸಿದರು.
ಕಳೆದ ಕೆಲ ತಿಂಗಳುಗಳಿಂದ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ಸ್ಥಗಿತಗೊಂಡಿತ್ತು. ಹೀಗಾಗಿ ಬೆಳಗ್ಗೆ 6 ಗಂಟೆಗೆ ಕೋಲಾರದಿಂದ ಹೊರಡುತ್ತಿದ್ದ ರೈಲು, ಶಿಡ್ಲಘಟ್ಟಕ್ಕೆ 7.25 ಗಂಟೆಗೆ ಬಂದು ಬೆಂಗಳೂರಿಗೆ 10 ಗಂಟೆಗೆ ತಲುಪುತ್ತಿತ್ತು. ಇದರಿಂದಾಗಿ ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಬೆಳ್ಳಂಬೆಳಗ್ಗೆ ನಿಲ್ದಾಣಕ್ಕೆ ದೌಡಾಯಿಸಬೇಕಾಗಿತ್ತು. ಆದರೆ ಈಗ ವೈಟ್‌ಫೀಲ್ಡ್‌ಗೆ ತೆರಳುವ ರೈಲು ಕೋಲಾರವನ್ನು ಬೆಳಗ್ಗೆ 7.30ಕ್ಕೆ ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಬೆಳಗ್ಗೆ 8.45 ಗೆ ಬರುವುದರಿಂದ ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹೋಗುವ ಸರ್ಕಾರಿ ನೌಕರರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ರೈತರಿಗೂ ಕೆ.ಆರ್‌.ಪುರ ಮಾರುಕಟ್ಟೆಗೆ ಹಣ್ಣು ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸಲು ನೆರವಾಗಲಿದೆ.
ಕೋಲಾರದಿಂದ ಆಗಮಿಸುವ ಈ ಹೊಸ ರೈಲು ಯಲಹಂಕದಿಂದ ಚನ್ನಸಂದ್ರ, ಕೃಷ್ಣರಾಜಪುರಂ ಹಾಗೂ ಹೂಡಿ ಮೂಲಕ ಬೆಳಗ್ಗೆ 10.55 ಕ್ಕೆ ವೈಟ್ ಫೀಲ್ಡ್ ಗೆ ತಲುಪಲಿದೆ. ಪುನಃ ವೈಟ್ ಫೀಲ್ಡ್ ನಿಂದ 4.10 ಕ್ಕೆ ಹೊರಟು ಶಿಡ್ಲಘಟ್ಟಕ್ಕೆ 6.15 ಕ್ಕೆ ಬರಲಿದೆ.
“ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದ ನೈರುತ್ಯ ರೈಲ್ವೆ ಇಲಾಖೆ ಬೆಂಗಳೂರಿನ ಯಶವಂತಪುರದಿಂದ ಚಿಕ್ಕಬಳ್ಳಾಪುರದ ಮೂಲಕ ನಿಜಾಮುದ್ದೀನ್‌ ದೆಹಲಿ ಎಕ್ಸ್ ಪ್ರೆಸ್‌ ರೈಲು ಆರಂಭಿಸಿ ಕೆಲವೇ ತಿಂಗಳಿಗೆ ಸ್ಥಗಿತಗೊಳಿಸಿತು. ಇದರಿಂದ ಜಿಲ್ಲೆಯಿಂದ ನೇರವಾಗಿ ದೆಹಲಿಗೆ ಹೊರಡುತ್ತಿದ್ದ ಪ್ರಯಾಣಿಕರು, ಪ್ರವಾಸಿಗರಿಗೆ ಬೇಸರ ತರಿಸಿತ್ತು. ಆದರೆ ಕೋಲಾರ ಮಾರ್ಗವಾಗಿ ಶಿಡ್ಲಘಟ್ಟ ಚಿಕ್ಕಬಳ್ಳಾಪುರ ಮೂಲಕ ಬೆಂಗಳೂರು ಹಾಗೂ ವೈಟ್ ಫೀಲ್ಡ್ ಗೆ ಹೊಸ ರೈಲು ಬರುತ್ತಿರುವುದು ಸಹಜವಾಗಿಯೇ ಜಿಲ್ಲೆಯ ಪ್ರಯಾಣಿಕರಲ್ಲಿ ಸಂತಸ ತಂದಿದೆ” ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ತಿಳಿಸಿದ್ದಾರೆ.
ಬಿಜೆಪಿ ನಗರ ಮಂಡಲ ಅಧ್ಯಕ್ಷ ರಾಘವೇಂದ್ರ, ಬಿ.ಸಿ.ನಂದೀಶ್, ನಗರಸಭಾ ಸದಸ್ಯ ನಾರಾಯಣಸ್ವಾಮಿ, ಮುಖೇಶ್, ದಾಮೋದರ್ ಹಾಜರಿದ್ದರು.

error: Content is protected !!