ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶುಕ್ರವಾರ 6.5 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಸರ್ಕಾರದಿಂದ ನಾಗರೀಕರ ಮೂಲಭೂತ ಸೌಲಭ್ಯಗಳು ಹಾಗೂ ರಸ್ತೆ ಕಾಮಗಾರಿಗಾಗಿ ಕೋಟ್ಯಾಂತರ ರೂಗಳು ಬಿಡುಗಡೆಯಾಗುತ್ತಿದ್ದು, ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ತೀರಾ ಹದಗೆಟ್ಟಿದ್ದ ಹೆಚ್.ಕ್ರಾಸ್-ವಿಜಯಪುರ ರಸ್ತೆಯನ್ನು 19.5 ಕೋಟಿ ರೂಗಳ ವೆಚ್ಚದಲ್ಲಿ ಹಾಗೂ ಕಾಚಹಳ್ಳಿಯಿಂದ ಹಂಡಿಗನಾಳ ಕ್ರಾಸ್ ವರೆಗೆ 6.2 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆಯನ್ನು ಅಭಿವೃಧ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹಾಗೂ ಶಿಡ್ಲಘಟ್ಟದಿಂದ ಕೋಲಾರಕ್ಕೆ ಸಂಚರಿಸಲು ಅನುಕೂಲವಾಗಲಿದೆ ಎಂದರು.
ಗ್ರಾಮಸ್ಥರು ತಮ್ಮ ಗ್ರಾಮಗಳಲ್ಲಿ ನಡೆಯುವ ರಸ್ತೆ ಇನ್ನಿತರೆ ಕಾಮಗಾರಿಗಳನ್ನು ಗುಣಮಟ್ಟವನ್ನು ಪರಿಶೀಲಿಸಬೇಕು. ಕಳಪೆ ಕಾಮಗಾರಿ ನಡೆಸಿದರೆ ತಮಗೆ ಅಥವಾ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕೆಂದು ಹೇಳಿದರು.
ಮೇಲೂರಿನ ಫ್ರೌಡಶಾಲಾ ಕಟ್ಟಡದ ನವೀಕರಣ ಕಾಮಗಾರಿಗೆ ೧೩.೫ ಲಕ್ಷ ರೂಗಳು ಬಿಡುಗಡೆಯಾಗಿದ್ದು, ಏಪ್ರಿಲ್ ಒಳಗಾಗಿ ಕಾಮಗಾರಿ ಮುಗಿಸುವಂತೆ ಅದಿಕಾರಿಗಳಿಗೆ ಸೂಚಿಸಿದರು.
ಹಾಪ್ ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ, ಬಿ.ವಿ. ಮುನೇಗೌಡ, ಎಂ.ಎಂ.ಸ್ವಾಮಿ, ಮೇಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆಂಜಿನೇಯರೆಡ್ಡಿ, ಕೆ.ಮಂಜುನಾಥ್, ಮುರಳಿ, ಕೆ.ಎಂ,ಎಫ್ ನಿರ್ದೇಶಕ ಶ್ರೀನಿವಾಸ್, ಭೀಮೇಶ್ ಹಾಜರಿದ್ದರು.