ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಕೊರೊನಾ, ಸ್ವಚ್ಛತೆ ಮತ್ತು ಪರಿಸರ ಕುರಿತ ಜಾಗೃತಿ ಮೂಡಿಸುವ ಬೀದಿ ನಾಟಕಕ್ಕೆ ಚಾಲನೆ ನೀಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿದರು.
ಕೊರೊನಾ ಎಂಬ ಖಾಯಿಲೆಯು ನಮಗೆ ಸ್ವಚ್ಛತೆ ಹಾಗೂ ಪರಿಸರ ಕಾಪಾಡಿಕೊಳ್ಳುವ ಅನಿವಾರ್ಯತೆಯನ್ನು ತಿಳಿಸಿಕೊಟ್ಟಿದೆ. ಈ ಮೂರೂ ವಿಚಾರವನ್ನು ಜನರಿಗೆ ಬೀದಿ ನಾಟಕದ ರೂಪದಲ್ಲಿ ಮನದಟ್ಟು ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
“ಬೇರು ಬೆವರು” ಕಲಾ ತಂಡದಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕರು ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳು ಸೇರಿದಂತೆ ಕೊರೊನಾ ವೈರಸ್ ಉಂಟು ಮಾಡುತ್ತಿರುವ ಹಾನಿಯ ಕುರಿತು ಸಾರ್ವಜನಿಕರಿಗೆ ಎಳೆ ಎಳೆಯಾಗಿ ಬಿಡಿಸಿ ಮನಮುಟ್ಟುವಂತೆ ನಾಟಕ ಪ್ರದರ್ಶಿಸಿದರು. ಇದರೊಂದಿಗೆ ನಮ್ಮ ಮನೆ ಹಾಗೂ ಸುತ್ತಮುತ್ತ ಸ್ವಚ್ಛವಾಗಿರಿಸಿಕೊಳ್ಳಬೇಕಾದ ಅಗತ್ಯ ಮತ್ತು ಪರಿಸರ ಕಾಪಾಡಬೇಕಾದ ರೀತಿಗಳನ್ನು ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡದಾಸರಹಳ್ಳಿ ಮತ್ತು ನಗರದ ಸಿದ್ಧಾರ್ಥ ನಗರದ ಶಾಲೆಯ ಬಳಿ “ಬೇರು ಬೆವರು” ಕಲಾ ತಂಡದವರು ಜನಜಾಗೃತಿ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಂ.ತ್ಯಾಗರಾಜ್, ಮಹಿಳಾ ಜ್ಞಾನವಿಕಾಸ ಅಧಿಕಾರಿ ಲಕ್ಷ್ಮಿ, ಸೇವಾಪ್ರತಿನಿಧಿ ಲಾವಣ್ಯ, ಲಕ್ಷ್ಮಿ, “ಬೇರು ಬೆವರು” ಕಲಾ ತಂಡದ ಮಹೇಶ್, ಚಂದ್ರಶೇಖರ್, ಚಿ.ಮು.ಹರೀಶ್ ಹಾಜರಿದ್ದರು.