Home News ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿ ಆಂದೋಲನ

ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿ ಆಂದೋಲನ

0

ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ “ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ”ವೆಂಬ ಘೋಷಣೆಯುಳ್ಳ ಬ್ಯಾನರ್‌ನ್ನು ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಆನೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗ ಬ್ಯಾನರ್ ಕಟ್ಟುವ ಮೂಲಕ ಜನತೆಗೆ ಮಾಹಿತಿ ನೀಡುವ ಆಂದೋಲನಕ್ಕೆ ಬುಧವಾರ ಚಾಲನೆ ನೀಡಿದರು.

 ರೈತ ಮುಖಂಡ ಬೆಳ್ಳೂಟಿ ಮುನಿಕೆಂಪಣ್ಣ ಮಾತನಾಡಿ, ರೈತರಿಗೆ ಮಾರಕವಾಗಿರುವ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸಿದ ಸರ್ಕಾರದ ವಿರುದ್ದ ಶಾಸಕರು ಮೌನವಾಗಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದರು. ಸುಗ್ರೀವಾಜ್ಞೆಯ ಮುಖಾಂತರ ಅನೇಕ ತಿದ್ದುಪಡಿಗಳನ್ನು ತಂದು ರಾಜ್ಯಪಾಲರ ಸಹಿಯನ್ನೂ ಪಡೆದಿರುವುದು ರಾಜ್ಯದ ರೈತರನ್ನು, ಗ್ರಾಮೀಣ ಜನರನ್ನು ಮಾತ್ರವಲ್ಲ, ಇಡೀ ನಾಗರೀಕ ಸಮಾಜವನ್ನೇ ಬೆಚ್ಚಿ ಬೀಳಿಸಿದೆ ಎಂದರು.

 ರೈತ ಮುಖಂಡ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಸಮಾನತೆಯ ಆಶಯವುಳ್ಳ ’ಕರ್ನಾಟಕ ಭೂಸುಧಾರಣಾ ಕಾಯ್ದೆ’ ಕರ್ನಾಟಕದ ಹೆಮ್ಮೆಯ ಕಿರೀಟದಂತಿದ್ದು ಆದರೇ ಕಾಯ್ದೆಯಲ್ಲಿ ಅನೇಕ ತಿದ್ದುಪಡಿ ತಂದು ರೈತರು ಭೂಮಿ ಕಳೆದುಕೊಳ್ಳುವ ಅಪಾಯ ತಂದಿಟ್ಟಿದೆ. ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಕಾಯ್ದೆಯನ್ನು ಜಾರಿಗೊಳಿಸಲು ಯಾವ ಕಾರಣಕ್ಕೂ ಬಿಡುವುದಿಲ್ಲ. ಇದರ ವಿರುದ್ಧ ರಾಜ್ಯ-ಜಿಲ್ಲೆ-ತಾಲ್ಲೂಕು-ಹೋಬಳಿ ಮತ್ತು ಪ್ರತಿ ಗ್ರಾಮ ಮಟ್ಟದಲ್ಲಿ ಜನತೆಗೆ ಅರಿವು ಮೂಡಿಸುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು.

 ಮುಂದಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಂಚರಿಸಿ ಬ್ಯಾನರ್ ಅಳವಡಿಸುವ ಮೂಲಕ ಜನತೆಗೆ ಮಾಹಿತಿ ನೀಡುವ ಕೆಲಸವನ್ನು ಆಮದೋಲನ ಸಮಿತಿ ವತಿಯಿಂದ ಮಾಡಲಾಗುವುದು ಎಂದರು.

 ಈ ಸಂದರ್ಭದಲ್ಲಿ ಆನೂರು ಗ್ರಾಮ ಪಂಚಾಯಿತಿ ಪಿಡಿಓ ಕಾತ್ಯಾಯಿನಿ, ರೈತ ಮುಖಂಡರಾದ ಸುರೇಶ್, ಶ್ರೀರಾಮಪ್ಪ, ಅಭಿಲಾಶ್, ಶಿವು, ದೇವರಾಜ್, ಶ್ರೀನಿವಾಸ್, ಬಿ.ಸಿ.ರಮೇಶ್, ಮುನಿಯಪ್ಪ, ನಾರಾಯಣಸ್ವಾಮಿ ಹಾಜರಿದ್ದರು.

error: Content is protected !!