ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರ ಜೀವನಾಧಾರಿತ ಮಹಾನಾಯಕ ದಾರವಾಹಿಯನ್ನು ಪ್ರಸಾರ ಮಾಡದಂತೆ ವಾಹಿನಿಯೊಂದರ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ದಸಂಸ ವತಿಯಿಂದ ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ದಸಂಸ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್ ಮಾತನಾಡಿ ದೇಶ ಕಂಡ ಅಪ್ರತಿಮ, ಮಾನವತಾವಾದಿಗಳಲ್ಲಿ ಒಬ್ಬರಾದ ಡಾ.ಅಂಬೇಡ್ಕರ್ ಅವರು ರಚಿಸಿದಂತಹ ಸಂವಿಧಾನದಡಿಯಲ್ಲಿ ನಡೆಯುತ್ತಿರುವ ದೇಶದಲ್ಲಿ ಅವರ ಜೀವನಾಧಾರಿತ ದಾರವಾಹಿಯನ್ನು ಪ್ರಸಾರ ಮಾಡುವುದನ್ನು ವಿರೋಧಿಸಿ ಕೆಲ ಕಿಡಿಗೇಡಿಗಳು ವಾಹಿನಿಯ ಮುಖ್ಯಸ್ಥನಿಗೆ ಬೆದರಿಕೆ ಹಾಕಿರುವ ಕ್ರಮ ಸರಿಯಲ್ಲ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಶಿರಸ್ತೇದಾರ್ ಕೆ.ಎನ್.ಮಂಜುನಾಥ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಘಟನಾ ಸಂಚಾಲಕರಾದ ಟಿ.ಎ.ಚಲಪತಿ, ಎಲ್.ವೆಂಕಟೇಶ್, ಹುಜಗೂರು ವೆಂಕಟೇಶ್, ನಗರ ಸಂಚಾಲಕ ನರೇಶ್, ಪದಾಧಿಕಾರಿಗಳಾದ ವೆಂಕಟರಾಜು, ಮುರಳಿ, ಸುಂದರರಾಜು,ದೊಡ್ಡತಿರುಮಲಯ್ಯ, ಮುನಿಕೃಷ್ಣಪ್ಪ, ಶಿವು ಮತ್ತಿತರರು ಪಾಲ್ಗೊಂಡಿದ್ದರು.