
Sidlaghatta : ನಗರದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಭಾನುವಾರ ಆಚರಿಸಲಾಯಿತು.
In English: Sidlaghatta’s Raghavendra Swamy Matha on Muttur Street marked the 355th aradhana mahotsava of Sri Raghavendra Swamy over three days, with special pujas, a procession through the town, and a mass annadana organised by the Raghavendra Seva Trust.
ಈ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ನಡೆಸುವ ಆರಾಧನಾ ಮಹೋತ್ಸವವು ಶನಿವಾರ ಪ್ರಾರಂಭವಾಯಿತು.
ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಹಸ್ತೋದಕ, ಮಹಾಮಂಗಳಾರತಿ ನಡೆಯಿತು. ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಶನಿವಾರ ಸಂಜೆ ಶ್ರೀ ಗಾಯಿತ್ರಿ ಮಹಿಳಾ ಮಂಡಳಿಯವರಿಂದ ಭಕ್ತಿಗೀತೆಗಳು ಮತ್ತು ವಿದ್ಯಾ ರಂಗನಾಥ್ ಅವರಿಂದ ಭರತನಾಟ್ಯ ಆಯೋಜಿಸಲಾಗಿತ್ತು.
ಭಾನುವಾರ ನಗರದ ಪ್ರಮುಖ ರಸ್ತೆಗಳಲ್ಲಿ ರಾಯರ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಉತ್ಸವ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ಮೆರವಣಿಗೆ ಹಾದು ಹೋದ ರಸ್ತೆಗಳನ್ನು ಸಾರಿಸಿ ರಂಗವಲ್ಲಿ ಹಾಕಿ ಉತ್ಸವಕ್ಕೆ ಸ್ವಾಗತ ಕೋರಲಾಗಿತ್ತು. ಮೆರವಣಿಗೆಯಲ್ಲಿ ಮಹಿಳಾ ಸಂಘದ ಸದಸ್ಯರಿಂದ ಕೋಲಾಟ ನಡೆಯಿತು.
ದೇವಾಲಯದ ಆವರಣದಲ್ಲಿ ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ವಿ. ನಾಗರಾಜರಾವ್, ಕಾರ್ಯದರ್ಶಿ ಎನ್. ಶ್ರೀಕಾಂತ್, ಖಜಾಂಚಿ ಆರ್. ಮಧುಸೂದನ್, ಟ್ರಸ್ಟೀಗಳಾದ ಎ.ಎಸ್. ರವಿ, ಬಿ.ಕೃಷ್ಣಮೂರ್ತಿ, ಬಿ. ಆರ್. ಸುಧೀಂದ್ರ, ಬಿ. ಆರ್. ರವಿ, ವಿ.ಕೃಷ್ಣ, ಮಧು, ಹರೀಶ್, ವೆಂಕಟೇಶ್, ಬಾಸ್ಕರ್, ಮಂಜುನಾಥ್ ಹಾಜರಿದ್ದರು.