
Sidlaghatta : ಶಿಡ್ಲಘಟ್ಟ ನಗರದ ಮುತ್ತೂರು ಬೀದಿಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿ ಮಠದ ನೂತನ ಕಟ್ಟಡ ಉದ್ಘಾಟನೆ ಹಾಗೂ “ಶ್ರೀಕ್ಷೇತ್ರ ಕಿರು ಮಂತ್ರಾಲಯ” ಸ್ಮರಣ ಗ್ರಂಥದ ಬಿಡುಗಡೆ ಕಾರ್ಯಕ್ರಮವನ್ನು ಶ್ರೀರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಬಿ.ಎನ್.ರವಿಕುಮಾರ್ ನೂತನ ಕಟ್ಟಡವನ್ನು ಉದ್ಘಾಟಿಸಿ, ಮಠದ ಸೇವಾ ಕಾರ್ಯಗಳನ್ನು ಶ್ಲಾಘಿಸಿ, ಇಂತಹ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯೊಂದಿಗೆ ಸಾಮಾಜಿಕ ಸೌಹಾರ್ದತೆಯನ್ನೂ ಬೆಳೆಸುವ ಕಾರ್ಯದಲ್ಲಿ ಮಠಗಳ ಪಾತ್ರ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.
ಮಂಡ್ಯದ ಶ್ರೀ ವರಾಹ ಹರಿ ವಿಠಲದಾಸರು “ಶ್ರೀಕ್ಷೇತ್ರ ಕಿರು ಮಂತ್ರಾಲಯ” ಸ್ಮರಣ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿ, ಮಠದ ಇತಿಹಾಸ ಹಾಗೂ ದಾನಿಗಳ ಸೇವೆಯನ್ನು ದಾಖಲಿಸುವ ಈ ಗ್ರಂಥ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲಿದೆ. ಶ್ರೀರಾಘವೇಂದ್ರಸ್ವಾಮಿಗಳ ಆಶಯದಂತೆ ಪರೋಪಕಾರ ಮತ್ತು ಭಕ್ತಿಮಾರ್ಗದಲ್ಲಿ ನಡೆಯುವುದೇ ಈ ಮಠದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಶ್ರೀ ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ಎಸ್.ಪ್ರಕಾಶ್ ಮಾತನಾಡಿ, ಮಂತ್ರಾಲಯಕ್ಕೆ ತೆರಳಲು ಸಾಧ್ಯವಾಗದ ಭಕ್ತರಿಗೆ ರಾಯರ ಸಾನ್ನಿಧ್ಯವನ್ನು ತಲುಪಿಸುವ ಉದ್ದೇಶದಿಂದ ದೇಶದ ವಿವಿಧೆಡೆ ಮೃತ್ತಿಕಾ ಬೃಂದಾವನಗಳು ಸ್ಥಾಪನೆಯಾಗಿದ್ದು, ಶಿಡ್ಲಘಟ್ಟದ ಶ್ರೀಕ್ಷೇತ್ರ ಕಿರು ಮಂತ್ರಾಲಯ–ಶ್ರೀ ರಾಘವೇಂದ್ರ ಸ್ವಾಮಿ ಮಠ ಅವುಗಳಲ್ಲಿ ಪ್ರಮುಖವಾಗಿದೆ ಎಂದರು.
ಸೇವೆ, ಸಮರ್ಪಣೆ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ಈ ಮಠ ನಾಲ್ಕು ದಶಕಗಳಿಂದ ಭಕ್ತರ ಬದುಕಿನಲ್ಲಿ ನಂಬಿಕೆಯ ದೀಪ ಬೆಳಗುತ್ತಿದೆ ಎಂದು ಹೇಳಿದರು.
ಶ್ರೀರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ಕಾರ್ಯದರ್ಶಿ ಎನ್.ಶ್ರೀಕಾಂತ್, ಆರ್.ಮಧುಸೂದನ್, ವಾಸುದೇವರಾವ್, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಎಸ್.ರವಿ, ವಿ.ನವೀನ್, ಎಸ್.ಎನ್.ವಾಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
In English: The Sri Raghavendra Swamy Mutt in Sidlaghatta inaugurated its new building and released a commemorative volume, “Shri Kshetra Kiru Mantralaya,” on Sunday. MLA B.N. Ravikumar inaugurated the building and praised the mutt’s service activities, and devotees and trust officials attended the event.
ಈ ಮಠ ಹಿಂದೆ ಆಚರಿಸಿದ್ದ ಆರಾಧನಾ ಮಹೋತ್ಸವ ಕಾರ್ಯಕ್ರಮದ ಕುರಿತು ಇಲ್ಲಿ ಓದಿ.