Home News ಸಾಧನಾಸ್ಫೂರ್ತಿ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಅಭಿನಂದನೆ

ಸಾಧನಾಸ್ಫೂರ್ತಿ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಅಭಿನಂದನೆ

0

ನಗರದದ ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ಶಾಲಾ ಆವರಣದಲ್ಲಿ ಗುರುವಾರ ಜಿಲ್ಲಾ ಸಾರ್ವಜನಿಕಶಿಕ್ಷಣ ಇಲಾಖೆ, ಶಿಕ್ಷಕರ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ ಸಾಧನಾಸ್ಫೂರ್ತಿ ಶಿಕ್ಷಕರ ಅಭಿನಂದನಾ ಕಾರ್ಯಕ್ರಮ, ವಿದ್ಯಾಗಮ ಕಾರ್ಯಕ್ರಮ ಅನುಷ್ಟಾನ ಪ್ರಗತಿಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಜಿಲ್ಲಾ ಸಾರ್ವಜನಿಕಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ.ನಾಗೇಶ್ ಮಾತನಾಡಿದರು.

ಕೊರೋನಾ ಸಂಕಷ್ಟಕಾಲದಲ್ಲಿಯೂ ವಿದ್ಯಾರ್ಥಿಗಳು ಕಠಿಣಶ್ರಮವಹಿಸಿ ಸ್ವಕಲಿಕೆಯಲ್ಲಿ ತೊಡಗಿ ಓದಿ ಪರಿಶ್ರಮವಹಿಸಿದ್ದಾರೆ. ಶಿಕ್ಷಕರು ಮಕ್ಕಳ ಮನೆಗಳ ಬಳಿಗೆ ತೆರಳಿ, ಆನ್‌ಲೈನ್ ಮೂಲಕ, ವೀಡಿಯೋ ಪಾಠಗಳ ಮೂಲಕ ಪ್ರೇರೇಪಿಸಿದ ಫಲವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯು ಪ್ರಥಮಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.

ಶಾಲೆಗಳಿಗೆ ರಜೆ ಇದ್ದರೂ ಮಕ್ಕಳು ನಿರಂತರವಾಗಿ ಕಲಿಯಲು ಪ್ರೇರೇಪಿಸಿದ ಶಿಕ್ಷಕರ ಶ್ರಮವು ಶ್ಲಾಘನೀಯವಾದುದು. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಉತ್ತಮ ಎಸ್‌ಒಪಿ ಮುಂಜಾಗ್ರತಾಕ್ರಮಗಳನ್ನು ಅನುಸರಿಸಲಾಗಿತ್ತು. ಯಾವುದೇ ಅಡೆತಡೆಗಳಾಗದಂತೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜಿಲ್ಲೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸಿದೆ ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿರುವುದು ಶಿಕ್ಷಕರ ಕಾರ್ಯವೈಖರಿಗೆ ಸಿಕ್ಕ ಪ್ರೋತ್ಸಾಹವಾಗಿದ್ದು, ಮುಂದಿನ ಸಾಲಿನ ಫಲಿತಾಂಶ ಉತ್ತಮಪಡಿಸಲು ಈಗಾಗಲೇ ಯೋಜನೆ ರೂಪಿಸಿಕೊಳ್ಳಲಾಗಿದೆ. ಕಳೆದ ಸಾಲಿನ ಆರಂಭದಿಂದಲೇ ಯೋಜನೆ ರೂಪಿಸಿ ಅನುಷ್ಟಾನಗೊಳಿಸಿ, ಉತ್ತಮ ಫಲಿತಾಂಶ ಬರಲು ವಿದ್ಯಾರ್ಥಿಗಳ, ಪೋಷಕರ, ಶಿಕ್ಷಕರ, ಅಧಿಕಾರಿಗಳ ಸಂಘಟಿತ ಪ್ರಯತ್ನವಾಗಿದೆ ಎಂದರು.

ವಿದ್ಯಾಗಮ ಸಹಕಾರಿ: ಕೋವಿಡ್ ಹಿನ್ನೆಲೆಯಲ್ಲಿ ಉಂಟಾಗಿರುವ ಕಲಿಕಾ ಅಂತರವನ್ನು ಕನಿಷ್ಟಗೊಳಿಸಿ ಮಕ್ಕಳನ್ನು ನಿರಂತರ ಕಲಿಕೆಯತ್ತ ಪ್ರೋತ್ಸಾಹಿಸಲು ವಿದ್ಯಾಗಮ ಯೋಜನೆಯು ಸಹಕಾರಿಯಾಗಿದ್ದು, ತಾಲ್ಲೂಕಿನಲ್ಲಿ ಉತ್ತಮವಾಗಿ ಅನುಷ್ಟಾನಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

 ಈ ಸಂದರ್ಭದಲ್ಲಿ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರನ್ನು ಅಭಿನಂದಿಸಲಾಯಿತು.

ಜಿಲ್ಲಾ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ವಿಷಯಪರಿವೀಕ್ಷಕಿ ಕೃಷ್ಣಕುಮಾರಿ, ಅಕ್ಷರದಾಸೋಹ ತಾಲ್ಲೂಕು ಸಹಾಯಕ ನಿರ್ದೇಶಕ ಆಂಜನೇಯ, ಶಿಕ್ಷಣಸಂಯೋಜಕ ಭಾಸ್ಕರಗೌಡ, ಪರಿಮಳಾ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ, ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಮಹದೇವ್, ವಿವಿಧ ವಿಷಯಗಳ ಸಂಪನ್ಮೂಲ ಶಿಕ್ಷಕರ ತಂಡದ ಸದಸ್ಯರು, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಆಡಳಿತಮಂಡಳಿಯ ಪದಾಧಿಕಾರಿಗಳು, ತಮೀಮ್ ಅನ್ಸಾರಿ, ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು, ಅಧಿಕಾರಿಗಳು ಪಾಲ್ಗೊಂಡಿದ್ದರು.

error: Content is protected !!