Home News ಬಿರುಗಾಳಿ, ಆಲಿಕಲ್ಲಿನ ಮಳೆಗೆ ಬೆಳೆ, ಆಸ್ತಿ ನಾಶ

ಬಿರುಗಾಳಿ, ಆಲಿಕಲ್ಲಿನ ಮಳೆಗೆ ಬೆಳೆ, ಆಸ್ತಿ ನಾಶ

0

ತಾಲ್ಲೂಕಿನ ವಿವಿದೆಡೆ ಎರಡು ದಿನಗಳಿಂದ ರಾತ್ರಿ ವೇಳೆ ಸುರಿದ ಬಿರುಗಾಳಿ, ಆಲಿಕಲ್ಲಿನ ಮಳೆಗೆ ದ್ರಾಕ್ಷಿ, ಮಾವು, ಹಿಪ್ಪುನೇರಳೆ ಮುಂತಾದ ಬೆಳೆಗಳು ಹಾಳಾಗಿದ್ದು, ರೈತರಿಗೆ ಅಪಾರ ನಷ್ಟವುಂಟಾಗಿದೆ. ತಾಲ್ಲೂಕಿನಾದ್ಯಂತ ಸುಮಾರು ೫೦ ವಿದ್ಯುತ್ ಕಂಬಗಳು ಉರುಳಿದ್ದು ವಿದ್ಯುತ್ ವ್ಯತ್ಯಯವೂ ಉಂಟಾಗಿದೆ.

ಅಪ್ಪೇಗೌಡನಹಳ್ಳಿಯಲ್ಲಿ ಛಾವಣಿ ಹಾರಿ ಹೋದ ಮನೆ
ಆಲಿಕಲ್ಲಿನ ಮಳೆಗೆ ಸೀಳುಬಿಟ್ಟ ದ್ರಾಕ್ಷಿ[/caption] ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಎರಡು ವಾಸದ ಮನೆಗಳು, ಎರಡು ಚಂದ್ರಂಕಿ ಶೇಡ್ ಗಳು ಹಾಗೂ ಮೂರು ದನದ ಶೇಡ್ ಗಳ ಛಾವಣಿಯ ಶೀಟ್ ಗಳು ಹಾರಿಹೋಗಿವೆ. ಸುಮಾರು ೧೭ ಮರಗಳು ಉರುಳಿದ್ದು, ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದದ್ದರಿಂದ ವಿದ್ಯುತ್ ಕಂಬವೂ ಕೆಳಗೆ ಬಿದ್ದಿದೆ.
ಆಲಿಕಲ್ಲಿನ ಮಳೆಗೆ ಸೀಳುಬಿಟ್ಟ ದ್ರಾಕ್ಷಿ
ಆಲಿಕಲ್ಲಿನ ಮಳೆಗೆ ದ್ರಾಕ್ಷಿ ಸೀಳಿಹೋಗಿದ್ದರೆ, ಇನ್ನೂ ಪುಟ್ಟಪುಟ್ಟ ಕಾಯಿಗಳು ಉದುರಿಹೋಗಿವೆ. ಎಲೆಗಳು ಸೀಳಿವೆ. ಹಿಪ್ಪುನೇರಳೆ ಬೆಳೆ ಸಹ ಹಾಳಾಗಿ, ಪ್ರಯೋಜನಕ್ಕೆ ಬಾರದಂತಾಗಿದೆ. ಅಂಕತಟ್ಟಿಯಲ್ಲಿ ಎರಡು ವಿದ್ಯುತ್ ಕಂಬಗಳು ಬಿದ್ದಿದ್ದರೆ, ಮೇಲೂರಿನಲ್ಲಿ ಮೂರು ಕಂಬಗಳು ಉರುಳಿವೆ.
ವಿದ್ಯುತ್ ತಂತಿಗಳ ಮೇಲೆ ಉರುಳಿದ ಮರ
ಮೇಲೂರು ಗ್ರಾಮದ ವೃತ್ತದ ಬಳಿ ಮರವೊಂದು ಉರುಳಿ ಅಂಗಡಿ ಜಖಂಗೊಂಡಿದೆ. ಕಂಬದಹಳ್ಳಿ ರಸ್ತೆಯಲ್ಲಿ ಮರಗಳು ಉರುಳಿ ಎರಡು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಶೀಗೆಹಳ್ಳಿ ಬಳಿ ಒಂದು ವಾಸದ ಮನೆ ಬಿದ್ದು ಹೋಗಿದೆ ಮತ್ತು ಟೊಮೆಟೋ ಬೆಳೆ ನಾಶವಾಗಿದೆ.
ಜಂಗಮಕೋಟೆ ಹೋಬಳಿಯ ಬಳುವನಹಳ್ಳಿ, ಜೆ.ವೆಂಕಟಾಪುರ, ಮಿತ್ತನಹಳ್ಳಿ, ಹೊಸಪೇಟೆಯ ಸುತ್ತಮುತ್ತ ಆಲಿಕಲ್ಲಿನ ಮಳೆಯಿಂದಾಗಿ ಹಿಪ್ಪುನೇರಳೆ ಬೆಳೆ ಸಂಪೂರ್ಣ ನಾಶವಾಗಿದೆ. ಮಾವಿನ ಫಸಲು ಸಹ ಸಾಕಷ್ಟು ಹಾನಿಯಾಗಿದೆ. ತರಕಾರಿ, ಹೂ ಹಣ್ಣಿನ ಬೆಳೆಗಳಿಗೂ ತೊಂದರೆಯಾಗಿದೆ.
ತಾಲ್ಲೂಕಿನಲ್ಲಿ ಮಳೆಯ ಹಾನಿಯನ್ನು ಪರಿಶೀಲಿಸಲು ರೇಷ್ಮೆ, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಮಳೆಯ ಪರಿಣಾಮದಿಂದಾದ ನಷ್ಟದ ಅಂದಾಜನ್ನು ಪಟ್ಟಿ ಮಾಡುತ್ತಿದ್ದಾರೆ. ವಿದ್ಯುತ್ ಇಲಾಖೆಯವರು ಉರುಳಿ ಬಿದ್ದ ಮರಗಳನ್ನು ಪಕ್ಕಕ್ಕೆ ಸರಿಸಿ ಬಿದ್ದು ಹೋಗಿರುವ ಕಂಬಗಳನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

error: Content is protected !!