
Sidlaghatta : ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಅವರ 93ನೇ ಜನ್ಮದಿನವನ್ನು ಶಿಡ್ಲಘಟ್ಟದಲ್ಲಿ ಭಕ್ತಿ ಮತ್ತು ಗೌರವದಿಂದ ಆಚರಿಸಲಾಯಿತು. ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನಗರದ ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಕೇಕ್ ಕತ್ತರಿಸಿ ಮಕ್ಕಳೊಂದಿಗೆ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ಹೊಸ ಬಟ್ಟೆಗಳನ್ನು ವಿತರಿಸಿ ಸಂತೋಷ ಹಂಚಲಾಯಿತು. ಅಲ್ಲದೆ, ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ದೇವೇಗೌಡರ ಜನ್ಮದಿನವನ್ನು ಸಮಾಜಮುಖಿ ಸೇವೆಯ ರೂಪದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ನಗರಸಭೆ ಅಧ್ಯಕ್ಷ ಎಂ. ವೆಂಕಟಸ್ವಾಮಿ ಮಾತನಾಡುತ್ತಾ, “ಒಂದು ಸಾಮಾನ್ಯ ಹಳ್ಳಿಯಿಂದ ಉದ್ಭವಿಸಿ ದಿಲ್ಲಿಯ ಪ್ರಧಾನಮಂತ್ರಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದ ದೇವೇಗೌಡ ಅವರ ಬದುಕು ಎಲ್ಲರಿಗೂ ಆದರ್ಶವಾಗಿದೆ. ಅವರು ನಡೆಸಿದ ರೈತಪರ ಹೋರಾಟ ಮತ್ತು ಸ್ವಚ್ಛ ರಾಜಕೀಯ ಜೀವನ ನಮ್ಮೆಲ್ಲರಿಗೂ ದೀಪಸ್ತಂಭವಾಗಿದೆ” ಎಂದರು.
ಈ ವೇಳೆ ನಗರಸಭೆ ಸದಸ್ಯರು ನಾರಾಯಣಸ್ವಾಮಿ, ಎಸ್. ರಾಘವೇಂದ್ರ, ಲಕ್ಷ್ಮೀನಾರಾಯಣ, ಕೃಷ್ಣಮೂರ್ತಿ, ಮಂಜುನಾಥ್, ಬಾಲು ಹಾಗೂ ಜೆಡಿಎಸ್ ಮುಖಂಡರು ಎಸ್.ಎಂ. ರಮೇಶ್, ಶ್ರೀನಾಥ್, ಶಂಕರ್, ಶಶಿ, ಇಂತಿಯಾಜ್, ತೋಸಿಫ್, ದಾದಾಪೀರ್, ಖಾದೀರ್, ಎ. ರಾಮಚಂದ್ರಪ್ಪ, ಪ್ರಭು, ಆಸಿಫ್, ಮುಬಾರಕ್, ಶ್ರೀನಿವಾಸ್ ಮುರಳಿ ಮತ್ತು ಇತರರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ನೀಡಿದರು.