
Sidlaghatta : ಕೆಲವೊಂದು ಆಡಳಿತಾತ್ಮಕ ಮತ್ತು ತಾಂತ್ರಿಕ ಅಡಚಣೆಗಳಿಂದ ವಿಳಂಬವಾಗಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಗಂಗಾ ಕಲ್ಯಾಣ ಯೋಜನೆಯ ಪಂಪುಮೋಟಾರ್ ವಿತರಣೆಯ ಪ್ರಕ್ರಿಯೆ ಇದೀಗ ಪುನಾರಂಭವಾಗಿದ್ದು, ರೈತರಿಗೆ ಪರಿಕರ ವಿತರಣಾ ಕಾರ್ಯ ಮುಂದುವರೆದಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದ್ದಾರೆ.
ಬುಧವಾರ ಶಿಡ್ಲಘಟ್ಟ ಪ್ರವಾಸಿ ಮಂದಿರದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ನಿಗಮದ 2021–22 ಮತ್ತು 2022–23 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಪಂಪುಮೋಟಾರ್, ಕೇಬಲ್ ಹಾಗೂ ಇತರೆ ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಜನೆ ವಿಳಂಬವಾದರೂ ಈಗ ಸಮಸ್ಯೆಗಳನ್ನು ನಿವಾರಿಸಿ ರೈತರಿಗೆ ನೇರವಾಗಿ ಲಾಭ ತಲುಪುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕರು ರೈತರಿಗೆ ಕರೆ ನೀಡುತ್ತಾ, ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಮಧ್ಯವರ್ತಿಗಳ ಮೂಲಕ ಹೋಗದೇ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕದಲ್ಲಿ ಮಾಹಿತಿ ಪಡೆದು ಮುಂದುವರೆಯಬೇಕೆಂದು ಸಲಹೆ ನೀಡಿದರು. “ಅಕ್ರಮ ಅಥವಾ ಅವ್ಯವಹಾರಕ್ಕೆ ಯಾವುದೇ ಅವಕಾಶ ಇಲ್ಲ,” ಎಂದು ಅವರು ಖಚಿತಪಡಿಸಿದರು.
ಬಸವಾಪಟ್ಟಣ ಗ್ರಾಮದ ದೊಡ್ಡಮುನಿಯಪ್ಪ, ಕೋಟಗಲ್ ಗ್ರಾಮದ ನಾರಾಯಣಸ್ವಾಮಿ, ಬಚ್ಚಹಳ್ಳಿ ಗ್ರಾಮದ ನರಸಿಂಹಯ್ಯ, ಹಿತ್ತಲಹಳ್ಳಿ ಗ್ರಾಮದ ರವಿಕುಮಾರ್ ಮತ್ತು ನಂದನಹೊಸಳ್ಳಿ ಗ್ರಾಮದ ಶ್ರೀನಿವಾಸ್ ಅವರಿಗೆ ಪರಿಕರಗಳು ಹಸ್ತಾಂತರಿಸಲಾಯಿತು. ಉಳಿದ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿಗಳು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ತಾದೂರು ರಘು, ಶಾಸಕರ ಆಪ್ತ ಸಹಾಯಕ ಕುಮಾರ್ ಹಾಗೂ ಹಲವು ಫಲಾನುಭವಿ ರೈತರು ಉಪಸ್ಥಿತರಿದ್ದರು.