
Sidlaghatta : ಸರ್ಕಾರದ ನಿಯಮಗಳನ್ನು ಮೀರಿ, ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು ಯತ್ನಿಸಿದ ಆರೋಪದ ಮೇಲೆ ಶಿಡ್ಲಘಟ್ಟ ತಾಲ್ಲೂಕಿನ ಭೂದಾಖಲೆಗಳ ಕಚೇರಿಯ ಭೂಮಾಪಕ ಚಂದ್ರಶೇಖರ್ ಮೂರ್ತಿ ಅವರನ್ನು ಜಿಲ್ಲಾಧಿಕಾರಿ ಜಿ.ಪ್ರಭು ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.
ಏನಿದು ಪ್ರಕರಣ? ಶಿಡ್ಲಘಟ್ಟದ ಹನುಮಂತಪುರ ಗ್ರಾಮದಲ್ಲಿ ಸರ್ಕಾರವು ಹೊಸದಾಗಿ ‘ಹೈಟೆಕ್ ರೇಷ್ಮೆ ಮಾರುಕಟ್ಟೆ’ ನಿರ್ಮಿಸಲು ಜಾಗ ಗುರುತಿಸಿದೆ (ಸರ್ವೆ ನಂಬರ್ 181). ಈ ಜಾಗದ ಪಕ್ಕದಲ್ಲೇ ಇರುವ ಮತ್ತೊಂದು ಜಮೀನಿನ ಮಾಲೀಕರು (ಸರ್ವೆ ನಂಬರ್ 178) ಅಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಿಸಿದ್ದರು.
ಈ ಖಾಸಗಿ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಭೂಮಾಪಕ ಚಂದ್ರಶೇಖರ್ ಮೂರ್ತಿ ಅವರು ನಿಯಮಗಳನ್ನು ಗಾಳಿಗೆ ತೂರಿ ಭೂಮಿ ಅಳತೆ ಮಾಡಿಕೊಟ್ಟಿದ್ದರು. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗುವಂತೆ ನಡೆದುಕೊಂಡಿದ್ದ ಬಗ್ಗೆ ವರದಿ ಬಂದ ಹಿನ್ನೆಲೆಯಲ್ಲಿ ಡಿಸಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಇಲಾಖಾ ವಿಚಾರಣೆ ಮುಗಿಯುವವರೆಗೆ ಚಂದ್ರಶೇಖರ್ ಮೂರ್ತಿ ಅವರು ಕೆಲಸದಿಂದ ದೂರವಿರಬೇಕಾಗುತ್ತದೆ.