
Sidlaghatta : ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ಬೈಪಾಸ್ ರಸ್ತೆಯ ಪೂಜಮ್ಮ ದೇವಾಲಯ ವೃತ್ತದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸೋಮವಾರ ಮುಂಜಾನೆ ಹೈ ಮಾಸ್ಟ್ ದೀಪದ ಕಂಬ ಉರುಳಿ ಬಿದ್ದಿದೆ. ಘಟನೆಯು ಮುಂಜಾನೆ ನಡೆದಿದ್ದು ಈ ಸಮಯದಲ್ಲಿ ಅಲ್ಲಿ ಅಷ್ಟೇನೂ ಸಂಚಾರ ಇರುವುದಿಲ್ಲವಾದ್ದರಿಂದ ಸಂಭವನೀಯ ಅಪಾಯ ತಪ್ಪಿದೆ.
ಸೋಮವಾರ ಮುಂಜಾನೆ ಸುಮಾರು 4 ಗಂಟೆಗೆ ಲಾರಿಯೊಂದು ಅತಿ ವೇಗವಾಗಿ ಬಂದು ಹೈ ಮಾಸ್ಟ್ ವಿದ್ಯುತ್ ದೀಪಗಳ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಹೈ ಮಾಸ್ಟ್ ವಿದ್ಯುತ್ ದೀಪಗಳ ಕಂಬವು ಉರುಳಿ ಬಿದ್ದಿರುವ ದೃಶ್ಯವು ಅಲ್ಲಿನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಸಫಾಯಿ ಕರ್ಮಚಾರಿ ಕಾಲೋನಿ ಸಮಗ್ರ ಅಭಿವೃದ್ದಿ ಯೋಜನೆಯಡಿ ಈ ಹೈ ಮಾಸ್ಟ್ ವಿದ್ಯುತ್ ದೀಪದ ಕಂಬವನ್ನು ಕಳೆದ ವರ್ಷವಷ್ಟೆ ಅಳವಡಿಸಲಾಗಿತ್ತು.
ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಎಂ.ವೆಂಕಟಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲಿಸಿದರು. ಕೂಡಲೆ ನಗರಸಭೆ ಸಿಬ್ಬಂದಿಯಿಂದ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಲಾರಿ ಮತ್ತು ಚಾಲಕನ ವಿಳಾಸ ಪತ್ತೆ ಮಾಡಿ ದೂರು ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಸಧ್ಯಕ್ಕೆ ಘಟನೆ ನಡೆದ ಸಮಯದಲ್ಲಿ ಸಂಚಾರ ಇಲ್ಲವಾದ್ದರಿಂದ ಏನೂ ಅನಾಹುತ ನಡೆದಿಲ್ಲ ಎಂದು ಸಮಾಧಾನಪಟ್ಟರು.
ಸಾರ್ವಜನಿಕರ ಹಾಗೂ ಉತ್ತಮ ಸಂಚಾರದ ದೃಷ್ಟಿಯಿಂದ ಈ ಹೈ ಮಾಸ್ಟ್ ವಿದ್ಯುತ್ ದೀಪವನ್ನು ಮತ್ತೆ ಅಳವಡಿಸಲಾಗುವುದು ಎಂದು ಹೇಳಿದರು.
ಈ ವೇಳೆ ಸ್ಥಳೀಯ ನಿವಾಸಿಗಳು ಬೈಪಾಸ್ ರಸ್ತೆಯಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲು ಹಾಗೂ ಇಂತಹ ಸಂಭವನೀಯ ಅಪಘಾತ ಮತ್ತು ಅಪಾಯಗಳನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ನಗರಸಭೆ ಅಧಿಕಾರಿ, ಪೊಲೀಸರಲ್ಲಿ ಮನವಿ ಮಾಡಿದರು.