Home News ISKCONನಿಂದ ಬೆಳ್ಳೂಟಿ ಗ್ರಾಮದಲ್ಲಿ ಅಕ್ಷಯ ಪಾತ್ರೆಯ 81ನೇ ಅಡುಗೆಮನೆ ಆರಂಭ

ISKCONನಿಂದ ಬೆಳ್ಳೂಟಿ ಗ್ರಾಮದಲ್ಲಿ ಅಕ್ಷಯ ಪಾತ್ರೆಯ 81ನೇ ಅಡುಗೆಮನೆ ಆರಂಭ

0
Sidlaghatta ISKCON Akshaya Patra 81 Branch Inauguration

Belluti, sidlaghatta : “ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆ ಅತ್ಯಗತ್ಯ.” ಹೀಗೆಂದು ಶಾಸಕ ಡಾ. ಎಂ.ಸಿ. ಸುಧಾಕರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿ ದಿವಂಗತ ಎನ್.ವಿ. ಕೃಷ್ಣಮೂರ್ತಿ ರಾವ್ ಮತ್ತು ಪದ್ಮಾವತಮ್ಮ ಅವರ ಸ್ಮರಣಾರ್ಥ ನಿರ್ಮಿಸಿದ ’ಅಕ್ಷಯ ಪಾತ್ರೆ’ ಅಡುಗೆಮನೆಯನ್ನು ಅವರು ಉದ್ಘಾಟಿಸಿದರು. ಇನ್ಫೋಸಿಸ್‌ನ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ನೆರವಿನಿಂದ ಈ ಘಟಕ ಸ್ಥಾಪನೆಯಾಗಿದೆ.

ಆಧುನಿಕ ತಂತ್ರಜ್ಞಾನದೊಂದಿಗೆ ಸೇವೆ

ಇಸ್ಕಾನ್ ಅಕ್ಷಯ ಪಾತ್ರೆ ಸಂಸ್ಥೆಯು ಶಿಡ್ಲಘಟ್ಟದ 50 ಸರ್ಕಾರಿ ಶಾಲೆಗಳ 2,350 ಮಕ್ಕಳಿಗೆ ಬಿಸಿಯೂಟ ಒದಗಿಸಲಿದೆ. ಅಡುಗೆ ತಯಾರಿಕೆಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಪರಿಣಾಮವಾಗಿ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ. ಇದು ಗುಣಮಟ್ಟದ ಆಹಾರ ತಯಾರಿಕೆಗೆ ಸಹಕಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು. ಅಲ್ಲದೆ, ಇದು ಲಾಭದ ಉದ್ದೇಶವಿಲ್ಲದ ಸೇವಾ ಕಾರ್ಯಕ್ರಮವೆಂದು ಅವರು ಶ್ಲಾಘಿಸಿದರು.

‘ಪಿಎಂ ಪೋಷಣ್’ ಯೋಜನೆಯಡಿ ಅನುಷ್ಠಾನ

ಜಿಲ್ಲಾ ಪಂಚಾಯಿತಿ ಸಿಇಒ ಡಾ. ವೈ. ನವೀನ್ ಭಟ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ‘ಪಿಎಂ ಪೋಷಣ್’ ಯೋಜನೆಯಡಿ ‘ವಿಕಸಿತ ಭಾರತಕ್ಕಾಗಿ ಪೌಷ್ಟಿಕ ಆಹಾರ’ ಎಂಬ ಆಶಯದೊಂದಿಗೆ ಈ ಅಡುಗೆಮನೆ ಆರಂಭವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಬಿಸಿಯೂಟ ಒದಗಿಸುವ ಮೂಲಕ ಹಸಿವನ್ನು ನೀಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.

ಜಾಗತಿಕ ಮಟ್ಟದಲ್ಲಿ ಅಕ್ಷಯ ಪಾತ್ರೆ

ಅಕ್ಷಯ ಪಾತ್ರೆಯ ಸಹ-ಸಂಸ್ಥಾಪಕ ಶ್ರೀ ಚಂಚಲಪತಿ ಪ್ರಭು ಮಾಹಿತಿ ನೀಡಿದರು. ಈ ಘಟಕವು ಪ್ರತಿದಿನ 5,000ಕ್ಕೂ ಹೆಚ್ಚು ಮಕ್ಕಳಿಗೆ ತಾಜಾ ಮತ್ತು ಬಿಸಿ ಆಹಾರ ನೀಡಲು ಸಜ್ಜಾಗಿದೆ. 2000ನೇ ಇಸವಿಯಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ಅಕ್ಷಯ ಪಾತ್ರೆ ಇಂದು ಬೃಹತ್ ಚಳವಳಿಯಾಗಿದೆ. ಸದ್ಯ, ದೇಶದ 16 ರಾಜ್ಯಗಳಲ್ಲಿ 23.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸಂಸ್ಥೆಯು ಪೌಷ್ಟಿಕ ಆಹಾರ ಒದಗಿಸುತ್ತಿದೆ.

ಕಾರ್ಯಕ್ರಮದ ವೇಳೆ ಅಡುಗೆಮನೆಯ ಸ್ವಚ್ಛತೆ ಹಾಗೂ ದಾಸ್ತಾನು ಕೊಠಡಿಯನ್ನು ಅಧಿಕಾರಿಗಳು ಪರಿಶೀಲಿಸಿದರು. ನಂತರ, ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗುಗಳನ್ನು ವಿತರಿಸಲಾಯಿತು. ಜಿಲ್ಲಾಧಿಕಾರಿ ಜಿ. ಪ್ರಭು, ತಹಶೀಲ್ದಾರ್ ಗಗನ ಸಿಂಧು ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

Exit mobile version