Home News ಶಿಡ್ಲಘಟ್ಟದಲ್ಲಿ ನೂತನ ಬಸ್ ಘಟಕ ಉದ್ಘಾಟನೆ

ಶಿಡ್ಲಘಟ್ಟದಲ್ಲಿ ನೂತನ ಬಸ್ ಘಟಕ ಉದ್ಘಾಟನೆ

0
Sidlaghatta KSRTC Bus Depot Inauguration

ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಾಲ್ಕು ಎಕರೆ ಪ್ರದೇಶದಲ್ಲಿ 472 ಲಕ್ಷ ರೂಪಾಯಿ ವೆಚ್ಚದಲ್ಲಿ  ನಿರ್ಮಿಸಲಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ಬಸ್ ಘಟಕವನ್ನು ಉದ್ಘಾಟಿಸಿ ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಮಾತನಾಡಿದರು.

BMTC, KSRTC ಸೇರಿದಂತೆ ರಾಜ್ಯದ ವಿವಿಧ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ  ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿಯವರ ನೇತೃತ್ವದಲ್ಲಿ ಸಮಿತಿಯನ್ನು ಈಗಾಗಲೇ ರಚಿಸಲಾಗಿದ್ದು, ಸಮಿತಿಯ ವರದಿ ಬಂದ ನಂತರ ಸಾರಿಗೆ ಸಂಸ್ಥೆ ನೌಕರರಿಗೆ ವೇತನ ಪರಿಷ್ಕರಣೆಯಾಗಿ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

 ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ವರದಿ ಬಂದ ನಂತರ ಸಾರಿಗೆ ನೌಕರರ ವೇತನ ಪರಿಷ್ಕರಣೆ ಆಗಲಿದೆ. ಡೀಸೆಲ್ ದರ ತುಟ್ಟಿಯಾಗಿರುವ ಕಾರಣ ಸಾರಿಗೆ ಸಂಸ್ಥೆಗಳ ಆರ್ಥಿಕ  ನಷ್ಟವನ್ನು ತಪ್ಪಿಸಲು ಎಲೆಕ್ಟ್ರಿಕ್ ಬಸ್ ಗಳು ಮತ್ತು ಪರಿಸರ ಸ್ನೇಹಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(ಸಿ.ಎನ್.ಜಿ) ಬಸ್ ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

 ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪ್ರಸ್ತುತ ಇರುವ 45 ಸಾವಿರ ಹಳೆಯ ಬಸ್ ಗಳನ್ನು ಬದಲಿಸಿ ಹೊಸ ಬಸ್ ಗಳನ್ನು ಖರೀದಿಸಲಾಗುವುದು. ಸಾರಿಗೆ ಸಂಸ್ಥೆಯ ಬಸ್ ಗಳನ್ನು ಕಟ್ಟಕಡೆಯ ಗ್ರಾಮಕ್ಕೂ ತಲುಪಿಸಲು ಸರ್ಕಾರ ಕ್ರಮ‌ ಕೈಗೊಳ್ಳುತ್ತಿದೆ. ಕೋವಿಡ್ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಗೆ ನಷ್ಟವಾಗಿ ನೌಕರರಿಗೆ ವೇತನ ನೀಡಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾಗ ಪ್ರಸ್ತುತ ಮುಖ್ಯಮಂತ್ರಿಗಳು ಮತ್ತು ಹಿಂದಿನ‌ ಮುಖ್ಯಮಂತ್ರಿಗಳು ಒಟ್ಟು 3 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದರು. ಸಾರಿಗೆ ಸಂಸ್ಥೆಯನ್ನು ಲಾಭದಾಯಕವಾಗಿ ಮಾಡುವುದಕ್ಕಿಂತಲೂ ಜನರ ಸೇವೆ ಮಾಡುವ ಸಂಸ್ಥೆಯನ್ನಾಗಿ ಕಟ್ಟುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

 ರಾಜ್ಯದ ವಿವಿಧ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ದುಡಿಯುವ ಎಲ್ಲಾ ಮಹಿಳೆಯರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ  ಉಚಿತ ಬಸ್ ಪಾಸ್ ನೀಡುವ  ಚಿಂತನೆ ಸರ್ಕಾರದ ಮುಂದಿದೆ. ನೌಕರರ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ಸರ್ಕಾರ ಸಿದ್ದವಿದ್ದು, ನೌಕರರು ಯಾವುದೇ ಕಾರಣಕ್ಕೂ ಮುಷ್ಕರಕ್ಕೆ ಹೋಗಬಾರದು. ಕೋವಿಡ್ ಸಂದರ್ಭದಲ್ಲಿ ವಿವಿಧ ಕಾರಣಗಳಿಂದ ವಜಾಗೊಂಡಿದ್ದ 3 ಸಾವಿರ ನೌಕರರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ನುಡಿದರು.

 ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಹೋಬಳಿ ಮಟ್ಟದಲ್ಲಿ ಸಾರಿಗೆ ಅದಾಲತ್ ನಡೆಸಬೇಕು. ವಿದ್ಯಾರ್ಥಿಗಳು, ರೈತರು, ಮಹಿಳೆಯರು, ಬಡ ಪ್ರಯಾಣಿಕರು ಹಾಗೂ ರೈತರ ಉತ್ಪನ್ನಗಳ ಸಾಗಾಣಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಹಳ್ಳಿಹಳ್ಳಿಗಳ ಕಡೆಗೂ ವಿಸ್ತರಿಸಬೇಕು. ವಿದ್ಯಾರ್ಥಿಗಳ ಬಸ್ ಪಾಸ್ ಸರ್ಕಾರ ಭರಿಸಿದರೆ ತುಂಬಾ ಅನುಕೂಲವಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಬಸ್ ಶೆಲ್ಟರ್ ನಿರ್ಮಿಸಬೇಕು. ಬಸ್ ನಿಲ್ದಾಣಗಳ ಬಳಿ ನಿರ್ಮಿಸುವ ಅಂಗಡಿಗಳನ್ನು ಅಂಗವಿಕಲರಿಗೆ, ವೃದ್ಧರಿಗೆ, ಬಡವರಿಗೆ ನೀಡಿ ಅವರ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಎಂದರು.

 ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜು, ಶಾಸಕ ವಿ.ಮುನಿಯಪ್ಪ, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಉಪಾಧ್ಯಕ್ಷ ಅಫ್ಸರ್ ಪಾಷ, , ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಕ.ಎಆ.ರ.ಸಾ.ನಿಗಮ ಉಪಾಧ್ಯಕ್ಷ ಎಸ್.ಎನ್.ಈಶ್ವರಪ್ಪ, ನಿರ್ದೇಶಕರಾದ ಅರುಂಡಿ ನಾಗರಾಜ, ರುದ್ರೇಶ್, ರಾಜು ವಿಥಲಸ ಜರತಾರಘರ, ವಿಭಾಗ ನಿಯಂತ್ರಣಾಧಿಕಾರಿ ಹಿಮವರ್ಧನ ನಾಯ್ಡು ಅಲ್ಲೂರಿ, ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ವಿಜಯೇಂದ್ರ, ಸದಸ್ಯ ಬೆಳ್ಳೂಟಿ ಸಂತೋಷ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್, ತಹಶೀಲ್ದಾರ್ ಬಿ.ಎಸ್.ರಾಜೀವ್, ಪೌರಾಯುಕ್ತ ಶ್ರೀಕಾಂತ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version