
Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ, ಗ್ರಾಮದೇವತೆಗಳ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ತಂಬಿಟ್ಟಿನ ದೀಪೋತ್ಸವಗಳನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ತಾಲ್ಲೂಕಿನ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಮೇಲೂರಿನ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವದ ಅಂಗವಾಗಿ ನಡೆಯುವ ದೀಪೋತ್ಸವಗಳು ಈ ಹಿಂದೆ ಒಂದೊಂದು ಸಮುದಾಯದವರು ಒಂದೊಂದು ದಿನದಂತೆ ಆಚರಿಸುವ ವಾಡಿಕೆಯಿತ್ತು.
ಕಳೆದ 25 ವರ್ಷಗಳ ನಂತರ ಇದೇ ಮೊಟ್ಟಮೊದಲ ಬಾರಿಗೆ ಮಳ್ಳೂರು ಗ್ರಾಮಸ್ಥರೆಲ್ಲರೂ ಜಾತಿ, ಮತ, ಬೇಧವಿಲ್ಲದೆ ಒಂದಾಗಿ ಅದ್ದೂರಿಯಾಗಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಆಚರಿಸಿದ್ದು ವಿಶೇಷ.
ನೂರಾರು ಮಂದಿ ಹೆಣ್ಣು ಮಕ್ಕಳು, ಮಹಿಳೆಯರು ತಂಬಿಟ್ಟು ದೀಪಗಳನ್ನು ವಿವಿಧ ಬಗೆಯ ಅಲಂಕಾರಿಕ ಹೂವಿನ ಬುಟ್ಟಿಗಳಲ್ಲಿ ಇಟ್ಟುಕೊಂಡು ಮಳ್ಳೂರಿನಿಂದ ಮೇಲೂರಿಗೆ ಮೆರವಣಿಗೆ ಮೂಲಕ ತೆರಳಿ ಮೇಲೂರಿನ ಗ್ರಾಮದೇವತೆ ಶ್ರೀ ಗಂಗಾದೇವಿಗೆ ಬೆಳಗಿದರು.
ಗ್ರಾಮದ ಬೀದಿಗಳಿಗೆ ತಳಿರು ತೋರಣಗಳನ್ನು ಕಟ್ಟಿ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೃಹತ್ ಗಾತ್ರದ ಸ್ವಾಗತ ಕಮಾನುಗಳು ತಲೆ ಎತ್ತಿ ನಿಂತಿದ್ದವು. ತಮಟೆ ವಾದನಗಳಿಗೆ ಗ್ರಾಮದ ಯುವಕರು ಕುಣಿದು ಕುಪ್ಪಳಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ಏರ್ಪಡುವುದರ ಜೊತೆಗೆ, ದೂರದ ಊರುಗಳಿಂದ ಬಂದಿದ್ದ ನೆಂಟರಿಷ್ಟರಿಂದಾಗಿ ಮನೆಗಳಲ್ಲಿಯೂ ಸಂಭ್ರಮ ಮನೆ ಮಾಡಿತ್ತು. ದೀಪೋತ್ಸವಗಳ ಅಂಗವಾಗಿ ಗ್ರಾಮದಲ್ಲಿ ಮಾಂಸಾಹಾರದ ಘಮಲು ಮುಗಿಲು ಮುಟ್ಟಿತ್ತು. ಗಂಗಾದೇವಿಯ ದೀಪೋತ್ಸವ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಮಂದಿ ಭಕ್ತಾಧಿಗಳು ಆಗಮಿಸಿದ್ದರು.