
ಶಿಡ್ಲಘಟ್ಟ ನಗರದ 11, 22 ಮತ್ತು 23 ನೇ ವಾರ್ಡ್ ಸೇರುವ ಅಶೋಕ ರಸ್ತೆಯ ಪ್ರದೇಶದಲ್ಲಿ MSIL ನ ಮದ್ಯ ಮಳಿಗೆ ಸ್ಥಾಪಿಸುವ ಪ್ರಯತ್ನ ನಡೆದಿದ್ದು, ಬುಧವಾರ ಸ್ಥಳ ಪರಿಶೀಲಿಸಲು ಬಂದಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳ ಮುಂದೆ ನಾಗರಿಕರು ಹಾಗೂ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ವೇಣುಗೋಪಾಲ್, ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಗರದ 11, 22 ಮತ್ತು 23 ನೇ ವಾರ್ಡ್ ನ ನಾಗರಿಕರು, ರೈತಮುಖಂಡರು ಒಗ್ಗೂಡಿ ಅಬಕಾರಿ ಆಯುಕ್ತರಿಗೆ, ನಿರೀಕ್ಷಕರಿಗೆ ಮತ್ತು ಉಪನಿರೀಕ್ಷಕರಿಗೆ ಅಶೋಕ ರಸ್ತೆಯಲ್ಲಿ ಎಂ.ಎಸ್.ಐ.ಎಲ್ ನ ಮದ್ಯ ಮಳಿಗೆ ಸ್ಥಾಪನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಈ ಪ್ರದೇಶದವರೆಲ್ಲರ ಸಹಿ ಇರುವ ಪತ್ರವನ್ನು ನೀಡಿದ್ದೇವೆ. ಆದರೂ ಈ ದಿನ ಸ್ಥಳ ಪರಿಶಿಲನೆಗೆ ಅಬಕಾರಿ ಅಧಿಕಾರಿಗಳು ಬಂದಿದ್ದಾರೆ. ಅವರಿಗೆ ಕೌಟುಂಬಿಕ, ದೇವಸ್ಥಾನಗಳರುವ ಪ್ರದೇಶದಲ್ಲಿ ಎಂ.ಎಸ್.ಐ.ಎಲ್ ನ ಮದ್ಯ ಮಳಿಗೆ ಸ್ಥಾಪಿಸಬೇಡಿ. ಮದ್ಯಮಳಿಗೆ ಸ್ಥಾಪನೆಗೆ ನಮ್ಮೆಲ್ಲರ ವಿರೋಧವಿದೆ ಎಂದು ತಿಳಿಸಿದ್ದೇವೆ ಎಂದರು.
ನಗರಸಭೆ ಸದಸ್ಯ ಅನಿಲ್ ಕುಮಾರ್ ಮಾತನಾಡಿ, ನಗರದ 11, 22 ಮತ್ತು 23 ನೇ ವಾರ್ಡ್ ಸೇರುವ ಅಶೋಕ ರಸ್ತೆಯ ಪ್ರದೇಶದಲ್ಲಿ ಎಂ.ಎಸ್.ಐ.ಎಲ್ ನ ಮದ್ಯ ಮಳಿಗೆ ಸ್ಥಾಪಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಈ ಪ್ರದೇಶದ ನಾಗರಿಕರ ವಿರೋಧವಿದೆ. ಈ ಪ್ರದೇಶವು ಊರಿನ ಅತ್ಯಂತ ಹಳೆಯ ಸ್ಥಳವಾಗಿದ್ದು, ಇಲ್ಲಿ ಸುತ್ತಮುತ್ತ ಪುರಾತನ ದೇವಾಲಯಗಳಿವೆ. ಪೂರ್ವದಲ್ಲಿ ಅಭಯ ಆಂಜನೇಯಸ್ವಾಮಿ ದೇವಾಲಯ, ಪಶ್ಚಿಮದಲ್ಲಿ ಕಾಶಿ ವಿಶ್ವೇಶ್ವರ, ಅಯ್ಯಪ್ಪಸ್ವಾಮಿ ಮತ್ತು ನವಗ್ರಹ ದೇವಾಲಯವಿದ್ದರೆ, ದಕ್ಷಿಣದಲ್ಲಿ ಪ್ರಸಿದ್ಧ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಒಂದೆಡೆಯಿದ್ದಾರೆ. ಇದರೊಂದಿಗೆ ಪಾರ್ವತಿ, ಗಣೇಶ, ಸುಬ್ರಮಣ್ಯ, ಆಂಜನೇಯ, ಕೇದಾರೇಶ್ವರ ಮುಂತಾದ ದೇವರುಗಳಿವೆ. ಅಶ್ವತ್ಥಕಟ್ಟೆಗಳಿವೆ. ಸುಮಾರು ನಾನ್ನೂರು ವರ್ಷಗಳಷ್ಟು ಹಳೆಯದಾದ ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಿರುವ ಶಾಮಣ್ಣಬಾವಿಯಿದೆ. ಉತ್ತರಕ್ಕೆ ವೀರಾಂಜನೇಯಸ್ವಾಮಿ ದೇವಾಲಯವಿದೆ.
ಇಲ್ಲಿ ಶಾಲಾ ಕಾಲೇಜುಗಳ ಬಸ್ಸುಗಳನ್ನು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ಮತ್ತು ಇಳಿಸಲು ನಿಲ್ಲಿಸಲಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಸಾರ್ವಜನಿಕರಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಹೆಣ್ಣುಮಕ್ಕಳು ಗೃಹಿಣಿಯರು ವೃದ್ಧರು ದೇವಾಲಯಗಳಿಗೆ ಬಂದು ಹೋಗುವರು. ಹತ್ತಿರದಲ್ಲಿಯೇ ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಬ್ಯಾಂಕ್ ಕೂಡ ಕಾರ್ಯನಿರ್ವಹಿಸುತ್ತದೆ. ಅಲ್ಲಿಗೆ ನೂರಾರು ರೈತರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಬಂದು ಹೋಗುವರು. ಮದ್ಯಮಳಿಗೆಯಾದರೆ ಈ ಪ್ರದೇಶದ ಪರಿಸ್ಥಿತಿ ಹದಗೆಡುತ್ತದೆ ಎಂದರು.
ಈ ಸ್ಥಳದಲ್ಲಿ ಮದ್ಯಮಳಿಗೆಯನ್ನು ಸ್ಥಾಪಿಸುವುದನ್ನು ವಿವಿಧ ರೈತ ಸಂಘಟನೆಯ ಸದಸ್ಯರು, ಕನ್ನಡಪರ ಸಂಘಟನೆಗಳ ಸದಸ್ಯರು, ಮಾನವ ಹಕ್ಕುಗಳ ಸಂಘಟನೆಯ ಸದಸ್ಯರು ಹಾಗೂ ಇಲ್ಲಿ ವಾಸಿಸುವ ನಾಗರೀಕರು ವಿರೋಧಿಸಿದ್ದಾರೆ. ಸುತ್ತಮುತ್ತಲಿನಲ್ಲಿ ವಾಸಿಸುವವರ ಗಮನಕ್ಕೆ ತರದೇ ಅಧಿಕಾರಿಗಳು ಕಟ್ಟಡ ಮಾಲೀಕರೊಂದಿಗೆ ಶಾಮೀಲಾಗಿ ಮದ್ಯಮಳಿಗೆಯನ್ನು ಸ್ಥಾಪಿಸಲು ಮುಂದಾದರೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
ಮಾಜಿ ನಗರಸಭಾ ಸದಸ್ಯ ಡಿ.ಎಂ.ಜಗದೀಶ್ವರ್, ವೇಣು, ಎಲ್.ಮಂಜುನಾಥ್, ರೈತ ಮುಖಂಡ ದೇವರಾಜ್, ಶ್ರೀನಿವಾಸ್, ಡಿ.ವಿ.ವೆಂಕಟೇಶ್, ಏಜಾಜ್ ಪಾಷ, ಅಂಬಾರಿ ಮಂಜು ಹಾಜರಿದ್ದರು.