
Sidlaghatta : “ಸಾಮರಸ್ಯ ಮತ್ತು ಭಾವೈಕ್ಯತೆ ಇದ್ದರೆ ನಾವಿರುವ ಸ್ಥಳದಲ್ಲಿ ಶಾಂತಿ ಮತ್ತು ಸೌಹಾರ್ಧತೆ ನೆಲೆಸುತ್ತದೆ,” ಎಂದು ಶಿಡ್ಲಘಟ್ಟ ಆರಕ್ಷಕ ವೃತ್ತ ನಿರೀಕ್ಷಕ ಎಂ. ಶ್ರೀನಿವಾಸ್ ಅವರು ಹೇಳಿದರು.
ಮೇ 25ರಂದು ನಡೆಯಲಿರುವ ಶ್ರೀರಾಮ ಶೋಭಾಯಾತ್ರೆಯ ಅನ್ವಯ, ಶನಿವಾರ ನಗರದ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ವಿವಿಧ ಧರ್ಮಗಳ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಶ್ರೀನಿವಾಸ್ ಅವರು, ಶಿಡ್ಲಘಟ್ಟ ನಗರವು ಹಿಂದೂ ಮತ್ತು ಮುಸ್ಲಿಂ ಬಾಂಧವರ ಶಾಂತಿ-ಸೌಹಾರ್ದತೆಗೆ ಪ್ರಸಿದ್ಧಿ ಪಡೆದ ಸ್ಥಳವಾಗಿದ್ದು, ಮುಂದುವರಿದೂ ಈ ಆತ್ಮೀಯತೆ ಉಳಿಯಬೇಕೆಂದು ಕರೆ ನೀಡಿದರು.
“ಇದು ಶಿಡ್ಲಘಟ್ಟದ ಶಕ್ತಿ ಮತ್ತು ಹೆಮ್ಮೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲ ಧರ್ಮದವರು ಪರಸ್ಪರ ಗೌರವ ಮತ್ತು ಸಹಕಾರದಿಂದ ವರ್ತಿಸಬೇಕು,” ಎಂದರು.
ಶೋಭಾಯಾತ್ರೆಯ ದಿನ ವಾಹನ ಸಂಚಾರ ದಟ್ಟಣೆ ತಡೆಯಲು ಮತ್ತು ಅಹಿತಕರ ಘಟನೆಗಳನ್ನು ತಪ್ಪಿಸಲು ಆಯೋಜಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು. “ಪೊಲೀಸ್ ಇಲಾಖೆಯು ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಲಿದೆ,” ಎಂದು ಅವರು ಭರವಸೆ ನೀಡಿದರು.
ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಮಾಜಿ ಅಧ್ಯಕ್ಷ ಸುರೇಂದ್ರಗೌಡ, ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ ಹಾಗೂ ಸದಸ್ಯರುಗಳಾದ ಎಸ್. ರಾಘವೇಂದ್ರ, ಅನಿಲ್ ಕುಮಾರ್, ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಮನೋಹರ್, ನವೀನ್ ಕುಮಾರ್, ವಿಹಿಂಪ ತಾಲ್ಲೂಕು ಅಧ್ಯಕ್ಷ ಚೆಲುವರಾಜ್, ಪಿ.ಎಸ್.ಐ ವೇಣುಗೋಪಾಲ್ ಸೇರಿದಂತೆ ವಿವಿಧ ಧರ್ಮಗಳ ಪ್ರಮುಖರು ಉಪಸ್ಥಿತರಿದ್ದರು.