ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಿಡ್ಲಘಟ್ಟ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ೧೧ನೇ ಮೈಲಿನಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಿಗೆ ಈಚೆಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು ಮಾತನಾಡಿದರು.
ಸಮಾಜ ವಿಜ್ಞಾನ ಅಧ್ಯಯನದಿಂದ ಮಾನವೀಯ ಸಂಬಂಧಗಳು ವೃದ್ಧಿಯಾಗುತ್ತವೆ ಎಂದು ಅವರು ತಿಳಿಸಿದರು.
ಸಮಾಜವಿಜ್ಞಾನ ವಿಷಯಗಳನ್ನು ಅಲಕ್ಷ್ಯ ಮಾಡುವುದರಿಂದ ಇಂದು ಮಾನವೀಯ ಗುಣಗಳು ಮಾನವರಲ್ಲಿ ಕಣ್ಮರೆಯಾಗುತ್ತಿವೆ. ಮನುಷ್ಯರ ನಡುವೆ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಹಣ ಗಳಿಕೆಯೆ ಮುಖ್ಯವಾಗಿದೆ. ಮನುಷ್ಯರಲ್ಲಿ ಪ್ರೀತಿ, ಮಮತೆ, ಕರುಣೆ, ಅಭಿಮಾನ, ಪರಸ್ಪರ ಸಹಾಯ, ಸಹಕಾರವು ಮನುಷ್ಯರಲ್ಲಿ ಕಾಣುತ್ತಿಲ್ಲ. ಸ್ವಾರ್ಥವೇ ಪ್ರಧಾನವಾಗಿದೆ. ನಾನು ನನ್ನ ಸಂಪಾದನೆ ನನ್ನ ಕುಟುಂಬವೇ ಮುಖ್ಯ ಎಂಬ ಭಾವನೆ ಹೆಚ್ಚಾಗಿದೆ. ಹಿಂದಿನ ಉತ್ತಮ ಪರಂಪರೆಯನ್ನು, ಪರಸ್ಪರ ಕೊಡುಕೊಳ್ಳುವ ಸಂಸ್ಕೃತಿಯು ಇಂದು ಮರೆಯಾಗಿದೆ. ಇದಕ್ಕೆ ಕಾರಣ ಸಮಾಜವಿಜ್ಞಾನಗಳನ್ನು ನಿರ್ಲಕ್ಷ್ಯ ಮಾಡಿರುವುದೇ ಕಾರಣ ಎಂದರು.
ನಾವು ನಮ್ಮವರು, ನಮ್ಮ ಸಮಾಜ, ಗುರು ಹಿರಿಯರು, ತಂದೆ ತಾಯಿ, ಅಜ್ಜ ಅಜ್ಜಿ, ಚಿಕ್ಕಮ್ಮ ಚಿಕ್ಕಪ್ಪ ಹೀಗೆ ಹಲವು ಸಂಬಂಧಗಳ ಕೊಂಡಿಯನ್ನು ಕಳಚಿ ಹೋಗುತ್ತಿದೆ. ಸಾಮಾಜಿಕ ಸಾಮರಸ್ಯವನ್ನು, ಉತ್ತಮ ಬದುಕನ್ನು, ಸಂಸ್ಕಾರಗಳನ್ನು ಬೆಳೆಸುವ ಸಮಾಜವಿಜ್ಞಾನಗಳನ್ನು ದೂರ ಮಾಡಲಾಗಿದೆ. ಎಲ್ಲವನ್ನೂ ವ್ಯವಹಾರಿಕ ಪ್ರಜ್ಞೆಯಿಂದ ಕಾಣುತ್ತಿದ್ದೇವೆ. ಹಿಂದಿನ ಹಿರಿಯರು ಮಾಡಿದ ಉತ್ತಮ ಕೆಲಸಗಳು, ಅವರ ಮೌಲ್ಯಗಳು, ಮಾನವೀಯ ಗುಣಗಳನ್ನು, ಸಹಕಾರ ಮನೋಭಾವನೆಯನ್ನು ಸಮಾಜವಿಜ್ಞಾನಗಳಿಂದ ಪಡೆಯಬಹುದು. ಸಮಾಜವಿಜ್ಞಾನಗಳನ್ನು ಅಧ್ಯಯನ ಮಾಡಿ ರಾಜಕೀಯ ಮತ್ತು ಆಡಳಿತ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿರುವ ವ್ಯಕ್ತಿಗಳು ನಮ್ಮ ಸಮಾಜದಲ್ಲಿದ್ದಾಎಂಬುದನ್ನು ಮರೆಯಬಾರದು ಎಂದರು.
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲೆ ಕುಬ್ರ, ಪ್ರೌಢಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ ಹಾಗೂ ವಿವಿಧ ಪ್ರೌಢಶಾಲೆಗಳ ಸಮಾಜವಿಜ್ಞಾನ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -