Home News ನಾಲ್ಕು ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ : ಸಂಸದ ಎಸ್.ಮುನಿಸ್ವಾಮಿ

ನಾಲ್ಕು ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ : ಸಂಸದ ಎಸ್.ಮುನಿಸ್ವಾಮಿ

0
Ambedkar Bhavan Sidlaghatta MP Muniswamy

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ ಹೆಸರಿನ ಭವನಕ್ಕಾಗಿ ನಗರದ ಹೃದಯ ಭಾಗದ‌ ತೋಟಗಾರಿಕೆ ಇಲಾಖೆ ಉಳಿಸಿಕೊಂಡಿರುವ ಜಮೀನಿನಲ್ಲಿ ಸೂಕ್ತ ಜಾಗವನ್ನು ಗುರುತಿಸಿ ಕಟ್ಟಡ ನಿರ್ಮಿಸಲು ನೆರವಾಗಬೇಕೆಂದು ತಾಲ್ಲೂಕಿನ ದಲಿತ ಯುವ ಮುಖಂಡರು ಸಂಸದ ಎಸ್.ಮುನಿಸ್ವಾಮಿ‌‌ ರವರನ್ನ ಬೇಟಿ ಮಾಡಿ ಮನವಿ ಸಲ್ಲಿಸಿದರು.

 ಹೊಸಕೋಟೆಯ ಕನ್ನಮಂಗಲ ಗ್ರಾಮದ ಸಂಸದರ  ತೋಟದ ಮನೆಯ ಬಳಿ ತೆರಳಿದ ದಲಿತ ಯುವ ಮುಖಂಡರು ಸಂಸದರೊಂದಿಗೆ ಈ ಬಗ್ಗೆ ಚರ್ಚಿಸಿದರು.

 ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಭವನ‌  4 ಕೋಟಿ ವೆಚ್ಚದಲ್ಲಿ ನಿರ್ಮಿಸೋಣ. ಸುಸಜ್ಜಿತ, ಶಾಶ್ವತವಾದ ಹಾಗೂ ವೈಜ್ಞಾನಿಕವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಭವನ ನಿರ್ಮಿಸಿ, ಇಬ್ಬರ ಪುತ್ಥಳಿ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಅವರ ಪುಸ್ತಕಗಳು ಸೇರಿದಂತೆ ಉತ್ತಮ ಗ್ರಂಥಾಲಯದ ವ್ಯವಸ್ಥೆ ಮಾಡಲಾಗುವುದು ಎಂದರು.

 ನನಗೆ ಸುಳ್ಳು ಭರವಸೆ ನೀಡುವ ಅಭ್ಯಾಸವಿಲ್ಲ. ಮಾತಿಗಿಂತ ಕೆಲಸ‌ ಮುಖ್ಯ. ಒಳ್ಳೆಯ ಕೆಲಸಕ್ಕೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ.‌ ದಲಿತ ಸಂಘಟನೆಗಳು ತಮ್ಮ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳು ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಶಕ್ತಿ ಹೆಚ್ಚಾಗುವುದರ ಜೊತೆಗೆ ಕೆಲಸವೂ ಪರಿಪೂರ್ಣವಾಗುತ್ತದೆ.‌ ಸಮಾಜ‌ ಕಲ್ಯಾಣ ಇಲಾಖೆಯಿಂದ ಹಾಗೂ ಕೇಂದ್ರದಿಂದ ಅನುದಾನ ಮಂಜೂರು‌ ಮಾಡಿಸಿ ಸುಮಾರು 4 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ ಮಾಡುವುದಾಗಿ ತಿಳಿಸಿದರು.  

 ಇನ್ನು ಒಂದು ವಾರದೊಳಗೆ ಅಧಿಕಾರಿಗಳು ಮತ್ತು ತಾಲ್ಲೂಕಿನ ದಲಿತ ಸಂಘಟನೆಗಳ ಸಭೆ ಕರೆದು ನಗರದ ಹೃದಯ ಭಾಗದಲ್ಲೇ ಉಪಯುಕ್ತವಾದ ಸ್ಥಳ ಗುರ್ತಿಸುವ ಕೆಲಸ ಮಾಡುವ ಭರವಸೆ ನೀಡಿದರು.

 “ದಲಿತ ಸಂಘಟನೆಗಳು ಸತತವಾಗಿ 30 ವರ್ಷಗಳಿಂದ ಹೋರಾಟಗಳು ಮಾಡಿಕೊಂಡು ಬರುತ್ತಿವೆ. ತಾಲ್ಲೂಕಿಗೆ ಹಲವು ಗ್ರೇಡ್ -1 ಅಧಿಕಾರಿಗಳು ಬಂದು ಹೋಗುತ್ತಿದ್ದಾರೆ. ಯಾವೊಬ್ಬ ಅಧಿಕಾರಿಯೂ ಸಹಾ ಕಾಳಜಿ ವಹಸುತ್ತಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಭವನಕ್ಕಾಗಿ 1.5 ಕೋಟಿ ಅನುದಾನ ಮೀಸಲಿಟ್ಟಿದೆ. ಆದರೆ ಅಧಿಕಾರಿಗಳು ಅಂಬೇಡ್ಕರ್ ಭವನಕ್ಕಾಗಿ ಜಾಗ ಗುರ್ತಿಸುವಲ್ಲಿ ಹಾಗೂ ನಗರದಲ್ಲಿ‌ ಭವನ ನಿರ್ಮಿಸಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿಯಾಗಿದೆ” ಎಂದು ದಲಿತ ಮುಖಂಡರು ಬೇಸರ ವ್ಯಕ್ತಪಡಿಸಿದರು.     

 ದೇಶದ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಅವರನ್ನ ಜಾತಿಯ ದೃಷ್ಟಿ ಕೋನದಲ್ಲಿ ಯಾರೂ ನೋಡಬಾರದು. ರಂಗಮಂದಿರ ಇರದ ಶಿಡ್ಲಘಟ್ಟದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾದರೆ ನಗರದಲ್ಲಿ ಕಲೆ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು, ವಿವಿಧ ಜಯಂತಿಗಳನ್ನು ಆಚರಿಸಲು ಅನುಕೂಲವಾಗುತ್ತದೆ.  ಕ್ಷೇತ್ರದ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಿ ಭವನ ನಿರ್ಮಿಸಬೇಕೆಂದು ದಲಿತ ಯುವ ಮುಖಂಡರು ಮನವಿಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ದಲಿತ ಮುಖಂಡರಾದ ಬೈರಗಾನಹಳ್ಳಿ ಗೋವಿಂದ, ಈಧರೆ ಪ್ರಕಾಶ್, ವೆಂಕಟೇಶ್, ಮಳ್ಳೂರು ಅಶೋಕ, ವೇಣು, ಭಕ್ತರಹಳ್ಳಿ ಪ್ರತೀಶ್, ಆನಂದ್ ಕುಮಾರ್, ವಿಜಯ್ ಕುಮಾರ್, ದೊಣ್ಣಹಳ್ಳಿ ರಮೇಶ್, ವೇಣು, ಹರಿಪ್ರಸಾದ್, ಕಿರಣ್, ಮುನಿಆಂಜಿನಪ್ಪ, ಮುನಿಕೃಷ್ಣ, ದೇವರಮಳ್ಳೂರು ಕ್ರಿಷ್ಣಪ್ಪ, ಚಲವಾಧಿ ತ್ಯಾಗರಾಜು, ನಗರಸಭೆ ಸದಸ್ಯ ಕೃಷ್ಣಮೂರ್ತಿ, ಕೋಟಹಳ್ಳಿ ಅನಿಲ್ ಕುಮಾರ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version