
Sidlaghatta : ಶಿಡ್ಲಘಟ್ಟ ವಿಧಾನಸಭಾ ವ್ಯಾಪ್ತಿಯಲ್ಲಿ ಸ್ಲಂ ಬೋರ್ಡ್ ನಿಂದ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಮನೆಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಶಾಸಕ ಬಿ.ಎನ್.ರವಿಕುಮಾರ್ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನಿಸಿದರು.
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ ನಿವೇಶನ ಹಂಚಿಕೆಯಲ್ಲಿ ಸಾಕಷ್ಟು ಅನ್ಯಾಯ ಆಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು. ಅಲ್ಲದೇ, ಅಲ್ಪಸಂಖ್ಯಾತ ಪ್ರದೇಶಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು.
“2018-19 ರಲ್ಲಿ ಸ್ಲಂ ಬೋರ್ಡ್ ನಿಂದ 500 ಮನೆಗಳನ್ನು ಶಿಡ್ಲಘಟ್ಟ ಕ್ಷೇತ್ರಕ್ಕೆ ನೀಡಿದ್ದರು. 2021-22 ರಲ್ಲಿ 612 ಮನೆಗಳನ್ನು ಕೊಟ್ಟಿದ್ದರು. ಒಟ್ಟು 1112 ಮನೆಗಳಲ್ಲಿ 474 ಮನೆಗಳು ಮಾತ್ರ ನಿಜವಾದ ಫಲಾನುಭವಿಗಳಿಗೆ ಸಿಕ್ಕಿದೆ. ಮಿಕ್ಕವು ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಗುತ್ತಿಗೆದಾರರ ಬಳಿ ಕೆಲಸ ಮಾಡುವವರ ಪಾಲಾಗಿದೆ. ಒಬ್ಬೊಬ್ಬರಿಗೂ 5, 10 ಮನೆಗಳು, ಅದರಲ್ಲೂ ಒಂದು ಸರ್ವೆ ನಂಬರಿನಲ್ಲಿ 70 ಮನೆಗಳ ಜಾಗವನ್ನು ಒಬ್ಬರೇ ತಮ್ಮದಾಗಿಸಿಕೊಂಡಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಸಚಿವರಿಗೆ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಇದುವರೆಗೂ ತನಿಖೆಯಾಗಲೀ ಕ್ರಮವಾಗಲೀ ಕೈಗೊಂಡಿಲ್ಲ”ಎಂದು ದೂರಿದರು.
“ಸುಮಾರು 40,000 ಮುಸ್ಲಿಂ ಜನಸಂಖ್ಯೆಯಿರುವ ಶಿಡ್ಲಘಟ್ಟ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರಿಗೆ ಆಗಿರುವ ಅನ್ಯಾಯವನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪರಿಹರಿಸಬೇಕು. ರಂಜಾನ್ ತಿಂಗಳಿನಲ್ಲಿ ಮುಸ್ಲೀಮರ ಪರವಾಗಿ ನ್ಯಾಯ ಕೇಳಲು ನಾನಿಲ್ಲಿ ಬಂದಿದ್ದೇನೆ.
2023-24ನೇ ಸಾಲಿನಲ್ಲಿ 40 ಮಂದಿ, 2024-25ನೇ ಸಾಲಿನಲ್ಲಿ 42 ಮಂದಿ, 2025-26ನೇ ಸಾಲಿನಲ್ಲಿ 70 ಮಂದಿ ರೇಷ್ಮೆ ನೂಲು ಬಿಚ್ಚಾಣಿಕೆದಾರರನ್ನು ಆಯ್ಕೆ ಮಾಡಿರುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕೇಳಿದಾಗ ಅದು ಸಚಿವರ ಆಯ್ಕೆ ಎನ್ನುವರು. ಶೇ 90 ರಷ್ಟು ಶ್ರೀಮಂತರನ್ನೇ ಆಯ್ಕೆ ಮಾಡಿದ್ದೀರಿ. ಬಡ ಮುಸ್ಲಿಂ ರೇಷ್ಮೆ ನೂಲು ಬಿಚ್ಚಾಣಿಕೆದಾರರನ್ನು ಏಕೆ ಕಡೆಗಣಿಸಿ ತಾರತಮ್ಯ ಮಾಡುತ್ತಿದ್ದೀರಿ” ಎಂದು ಪ್ರಶ್ನಿಸಿದರು.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಉತ್ತರಿಸಿ, “70 ಮನೆಗಳು ಒಬ್ಬರ ಹೆಸರಿನಲ್ಲಿರುವುದರ ಬಗ್ಗೆ ಪ್ರಸ್ತಾಪ ಮಾಡಿದ್ದೀರಲ್ಲ, ಅದನ್ನು ಆಗಿನ ಶಾಸಕರು ಆಯ್ಕೆ ಮಾಡಿರುವುದು. ರವಿಕುಮಾರ್ ಅವರೆ, ನೀವು ನಾಳೆ 11 ಗಂಟೆಗೆ ನನ್ನ ಕಚೇರಿಗೆ ಬನ್ನಿ, ಕೆ.ಎಂ.ಡಿ.ಸಿ ಅಧಿಕಾರಿಗಳನ್ನು ಕರೆಸುವೆ, ಸ್ಲಂ ಬೋರ್ಡ್ ಹಾಗೂ ಇತರೆ ಸಂಬಂಧಿಸಿದ ಅಧಿಕಾರಿಗಳನ್ನೂ ಕರೆಸುವೆ. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಏನೆಲ್ಲಾ ಸಮಸ್ಯೆಗಳಿದ್ದರೂ ಬಗೆಹರಿಸಿಕೊಡುತ್ತೇನೆ” ಎಂದರು.