
Sidlaghatta : ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, “ನಾನೂ ಇದೇ ಶಾಲೆಯಲ್ಲಿ 7ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದೇನೆ. ಇಂದು ಬ್ರಿಟನ್ ನಲ್ಲಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ಅದಕ್ಕೆ ಈ ಶಾಲೆಯಲ್ಲಿ ದೊರೆತ ಶಿಕ್ಷಣ, ಸಂಸ್ಕಾರ ಹಾಗೂ ಶಿಕ್ಷಕರು ತೋರಿದ ಮಾರ್ಗದರ್ಶನವೇ ಕಾರಣ” ಎಂದು ಹೇಳಿದರು.
“ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎಂಬ ಕಾರಣಕ್ಕೆ ಎಂದಿಗೂ ಕೀಳರಿಮೆ ಬೆಳೆಸಿಕೊಳ್ಳಬೇಡಿ. ಇಲ್ಲಿನ ಶಿಕ್ಷಣವೇ ನಿಮ್ಮ ಬದುಕಿಗೆ ಗಟ್ಟಿಯಾದ ಅಡಿಪಾಯ ಹಾಕುತ್ತದೆ. ಶಿಸ್ತು, ಪರಿಶ್ರಮ ಮತ್ತು ದೃಢ ಸಂಕಲ್ಪವಿದ್ದರೆ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳೂ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬಹುದು” ಎಂದು ಯುನೈಟೆಡ್ ಕಿಂಗ್ ಡಮ್ನ ಸ್ವಿಂಡನ್ ಬರೋ ಕೌನ್ಸಿಲ್ ನ ಕೌನ್ಸಿಲರ್ ಸುರೇಶ್ ಗಟ್ಟಾಪುರ್ ಹೇಳಿದರು.
ವಿದ್ಯಾರ್ಥಿಗಳಿಗೆ ಸಲಹೆ ಏನು?
ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಗೆ ಹೆದರಬಾರದು. ಕನ್ನಡದ ಜೊತೆಗೆ ಇಂಗ್ಲಿಷ್ ಹಾಗೂ ತಂತ್ರಜ್ಞಾನದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಗುರಿ ದೊಡ್ಡದಿದ್ದರೆ ಅದನ್ನು ಸಾಧಿಸಲು ನಿರಂತರ ಪರಿಶ್ರಮವೇ ಮುಖ್ಯ ಎಂದು ಸಲಹೆ ನೀಡಿದರು.
ಗ್ರಾಮದಿಂದ ಬ್ರಿಟನ್ವರೆಗಿನ ಪಯಣ
ತಮ್ಮ ಜೀವನ ಪಯಣವನ್ನು ವಿವರಿಸಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ ಕೊಂಡೇನಹಳ್ಳಿ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿ, ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ, ಪ್ರೌಢಶಿಕ್ಷಣವನ್ನು ಮೇಲೂರಿನಲ್ಲಿ, ಪಿಯುಸಿಯನ್ನು ಚಿಕ್ಕಬಳ್ಳಾಪುರದಲ್ಲಿ ಹಾಗೂ ಎಂಜಿನಿಯರಿಂಗ್ ಪದವಿಯನ್ನು ಚಿತ್ರದುರ್ಗದಲ್ಲಿ ಪೂರ್ಣಗೊಳಿಸಿದ್ದಾಗಿ ತಿಳಿಸಿದರು. ಬಳಿಕ ಕೆಜಿಎಫ್ ನ ಬಿಇಎಂಎಲ್ನಲ್ಲಿ ಸೇವೆ ಸಲ್ಲಿಸಿ, ಸಾಫ್ಟ್ ವೇರ್ ಕ್ಷೇತ್ರದ ಮೂಲಕ 2004ರಲ್ಲಿ ಯುಕೆಯ ಸ್ವಿಂಡನ್ ಗೆ ತೆರಳಿ ನೆಲೆಸಿದರು. ಅಲ್ಲಿ ಪ್ಯಾರಿಷ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿರುವ ಅವರು, ಸ್ವಿಂಡನ್ ಬರೋ ಕೌನ್ಸಿಲ್ನ ಶಾ (Shaw) ವಾರ್ಡ್ ನ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 2026ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ್ತೊಮ್ಮೆ ಕೌನ್ಸಿಲರ್ ಆಗಿ ಆಯ್ಕೆಯಾಗಿರುವುದಾಗಿ ಹೇಳಿದರು.
ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ. ಉಮೇಶ್ ಮಾತನಾಡಿ, “ಶಿಕ್ಷಣದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಉನ್ನತ ಸಾಧನೆ ಮಾಡಬಹುದು ಎಂಬುದಕ್ಕೆ ಸುರೇಶ್ ಗಟ್ಟಾಪುರ್ ಅವರ ಜೀವನವೇ ಸಾಕ್ಷಿ. ವಿದ್ಯಾರ್ಥಿಗಳು ಅವರ ಸಾಧನೆಯನ್ನು ಮಾದರಿಯಾಗಿ ಸ್ವೀಕರಿಸಬೇಕು” ಎಂದರು.
ಇದಕ್ಕೂ ಮುನ್ನ ಶಾಲೆಗೆ ಆಗಮಿಸಿದ ಸುರೇಶ್ ಗಟ್ಟಾಪುರ್ ಅವರನ್ನು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ, ಮುಖ್ಯಶಿಕ್ಷಕರು, ಶಿಕ್ಷಕ ವೃಂದ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸುರೇಶ್ ಗಟ್ಟಾಪುರ್ ಅವರ ಪತ್ನಿ ಕವಿತಾ, ಮುಖ್ಯಶಿಕ್ಷಕ ಎಚ್.ಎಂ. ಭಾಸ್ಕರ್, ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷೆ ಸರೋಜ ಎಸ್.ಎಂ., ನಿವೃತ್ತ ಉಪಪ್ರಾಂಶುಪಾಲ ಪಿ. ವೆಂಕಟೇಶ್, ಶ್ರೀನಿವಾಸ್, ಗ್ರಾಮಸ್ಥರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
In English: Suresh Gattapur, a Swindon Borough Council (UK) councillor who studied at Melur Government High School through Class 10, visited the school and urged students not to feel inferior for studying in a government school, calling it a strong foundation for life. Born to a farming family in Kondenahalli village, Chikkaballapur district, he went on to work in software after an engineering degree and settled in Swindon, UK, in 2004, where he now serves as a councillor for the Shaw ward.