
Bhaktarahalli, Sidlaghatta : ಬಡಮಕ್ಕಳಿಗೆ ಉತ್ತಮ ಶಿಕ್ಷಣ, ಶುದ್ಧ ನೀರು, ಪೌಷ್ಠಿಕ ಆಹಾರ ನೀಡುವ ಧ್ಯೇಯದೊಂದಿಗೆ ನಡೆಸುವ ಶಿಕ್ಷಣ ಸಂಸ್ಥೆಗಳು ಸಮಾಜೋದ್ಧಾರಕ ದೇವಾಲಯಗಳು ಎಂದು ಆಳಂದ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ. ಶಾಲೆಯಲ್ಲಿ 1000 ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕದ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಮಕ್ಕಳಲ್ಲಿ ದೇಶಭಕ್ತಿ ಮತ್ತು ಸಂಸ್ಕಾರ ಕಲಿಸಬೇಕು. ಜಾತಿ, ಮತಗಳನ್ನು ಮೀರಿ ಅವರಲ್ಲಿ ಏಕತಾ ಭಾವನೆ ಮೂಡಲಿ. ಮಕ್ಕಳ ಮನಸ್ಸು ಶುದ್ಧವಾಗಿರುವುದರಿಂದ, ಜಾತಿ-ಮತ ಭೇದಗಳನ್ನು ತಿಳಿಸದೇ “ಎಲ್ಲರೂ ನಮ್ಮವರು” ಎಂಬ ಭಾವ ಬೆಳೆಸಿ. ತಮ್ಮ ಸುತ್ತಲಿನ ಪರಿಸರ, ಊರು, ಗ್ರಾಮೀಣ ಪರಿಸರ, ನಾಡಿನ ಗುಣಾತ್ಮಕ ಅಂಶಗಳನ್ನು ತಿಳಿದಾಗ ಮಾತ್ರ ಹೃದಯ ವೈಶಾಲ್ಯತೆ ಬೆಳೆಯುತ್ತದೆ. ಒಳ್ಳೆಯದನ್ನು ಮೆಚ್ಚುವ, ಗುಣಗ್ರಾಹಿತ್ವವನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ, ಆದಿತ್ಯ ಆಟೋ ಪ್ರಾಡಕ್ಟ್ಸ್ ಅಂಡ್ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಛೇರ್ಮನ್ ಮತ್ತು ಎಂ.ಡಿ ಜಯರಾಮನ್ ಮತ್ತು ದಕ್ಷಿಣ ಭಾರತ ಫ್ಲೋರಿಕಲ್ಚರಿಸ್ಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಹಾಗೂ ರಾಜ್ಯದ ಖ್ಯಾತ ಪುಷ್ಪ ಉದ್ಯಮಿ ಟಿ.ಎಂ. ಅರವಿಂದ್ ಅವರು ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಬಿ.ಎಂ.ವಿ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗಾಗಿ 1000 ಲೀಟರ್ ಸಾಮರ್ಥ್ಯದ ನೀರು ಶುದ್ದೀಕರಣ ಆರ್.ಒ ಘಟಕ ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ನಿರ್ಮಿಸಿಕೊಟ್ಟಿರುವ ಬೆಂಗಳೂರಿನ ಎಫ್.ಐ.ಎಂ.ಇ.ಆರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪರವಾಗಿ ಪಾಯಲ್ ಪೂಣಚ್ಚ ಮತ್ತು ಉಪಾಸನ ಬರುವಾ ಅವರು ನೀರು ಶುದ್ದಿಕರಣ ಘಟಕಕ್ಕೆ ಚಾಲನೆ ನೀಡಿದರು.
ಬಿ.ಎಂ.ವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ. ವಿ. ಮುನೇಗೌಡ, ಕಾರ್ಯದರ್ಶಿ ಎಲ್. ಕಾಳಪ್ಪ, ಟ್ರಸ್ಟಿಗಳಾದ ಸಂತೆ ನಾರಾಯಣಸ್ವಾಮಿ, ಬಿ. ಕೆ. ರಾಮಚಂದ್ರ, ಬಿ. ವೈ. ಅಶ್ವತಪ್ಪ, ಬಿ. ಎ. ರಮೇಶ್ ಹಾಗು ಗ್ರಾಮದ ಮುಖಂಡರಾದ ಚಿದಾನಂದಮೂರ್ತಿ, ಹೇಮಂತಕುಮಾರ್, ವಿಶ್ವನಾಥ್, ಕೋಟೆ ಚನ್ನೇಗೌಡ, ಎ. ಎನ್. ದೇವರಾಜು, ಪ್ರಶಾಂತ್ ಹಾಜರಿದ್ದರು.