
Cheemangala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ವೀರ ಸಿಂಹಾಸನ ಸಂಸ್ಥಾನ ಬೆಳ್ಳವಿಯ ಪಟ್ಟದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
ಸಭೆಯಲ್ಲಿ ಮಾತನಾಡಿದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು, ಮಹಿಳೆಯರು ಮನೆಯ ಬೆಳಗುವ ದೀಪದಂತವರು. ಭಕ್ತಿ, ಸಂಸ್ಕಾರ ಮತ್ತು ಸತ್ಪ್ರವೃತ್ತಿಯ ಹಾದಿಯಲ್ಲಿ ಸಾಗಿದಾಗ ಮಾತ್ರ ಕುಟುಂಬ ಹಾಗೂ ಸಮಾಜ ಸುಭಿಕ್ಷವಾಗಿರಲು ಸಾಧ್ಯ. ಧರ್ಮಸ್ಥಳದ ಪೂಜ್ಯ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳು ಜನರಲ್ಲಿ ದೈವಭಕ್ತಿ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಜಾಗೃತಗೊಳಿಸುತ್ತವೆ ಎಂದು ತಿಳಿಸಿದರು.
ಇಂದಿನ ತಲೆಮಾರಿನ ಮಕ್ಕಳಿಗೆ ಅತಿಯಾಗಿ ಮೊಬೈಲ್ ನೀಡುವುದು ಅವರ ಭವಿಷ್ಯಕ್ಕೆ ನಾವೇ ಕೊಳ್ಳಿ ಇಟ್ಟಂತೆ. ಮೊಬೈಲ್ಗೆ ದಾಸರಾದರೆ ಮಕ್ಕಳ ಬೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಮೊಬೈಲ್ ವ್ಯಸನದಿಂದ ದೂರವಿಟ್ಟು, ಉತ್ತಮ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು, ಜ್ಞಾನದ ದಾರಿಯಲ್ಲಿ ನಡೆಯಲು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದು ಅವರು ಕರೆ ನೀಡಿದರು.
ಡಾ. ವೀರೇಂದ್ರ ಹೆಗ್ಗಡೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಹೊಂದಿದ್ದರೂ ಆ ರೀತಿಯ ಸಂಕಲ್ಪವಿಲ್ಲ, ಸೇವೆಯೇ ಅವರ ಧ್ಯೇಯ ಎಂದು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶವು ಅವರ ಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿಗಳ ಮೂಲಕ ಗೌರವಿಸಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ಸಿ.ಎಸ್, ರವರು ಮಾತನಾಡಿ ದೈನಂದಿನ ಕೆಲಸ ಕಾರ್ಯಗಳಲ್ಲಿ ಧಾರ್ಮಿಕತೆಯನ್ನು ಅಳವಡಿಸಿಕೊಳ್ಳುವುದೇ ನಿಜವಾದ ಧರ್ಮ ಎಂದರು. ಹಿರಿಯರನ್ನು ಗೌರವಿಸುವುದು, ಕಿರಿಯರಿಗೆ ಆಶೀರ್ವದಿಸುವುದು ಮತ್ತು ಸಾತ್ವಿಕ ಜೀವನ ನಡೆಸುವುದೇ ಧರ್ಮ ರಕ್ಷಣೆ. ಇತರ ಧರ್ಮಗಳನ್ನು ದೂಷಿಸದೆ ನಮ್ಮ ಧರ್ಮದ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ಯೋಜನಾಧಿಕಾರಿ ಪ್ರಸಾದ್ ,ಗ್ರಾಮದ ಮುಖಂಡರಾದ ಎಂ. ಅಯ್ಯಣ್ಣ, ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ, ಹಾಲಿನ ಡೈರಿ ಕಾರ್ಯದರ್ಶಿ ಶಶಿಕುಮಾರ್, ಆನಂದ, ಚರಣ್ ಮತ್ತು ಹೈನುಗಾರಿಕಾ ಸಹಕಾರ ಸಂಘದ ಪ್ರಶಾಂತ್, ಅನ್ನದಾಸೋಹ ಸಮಿತಿಯ ರಮೇಶ್, ತಾಲೂಕು ಸಮನ್ವಯಾಧಿಕಾರಿ ಅರುಣಾ, ವಲಯ ಮೇಲ್ವಿಚಾರಕರಾದ ಪಲ್ಲವಿ ಆರ್. ಹಾಗೂ ತಂಡದವರು ಭಾಗವಹಿಸಿದ್ದರು.