
Sidlaghatta : ಕನ್ನಡ ನಾಡು ನುಡಿ ಭಾಷೆ ನೆಲ ಜಲದ ಬಗ್ಗೆ ನಮ್ಮೆಲ್ಲರಲ್ಲೂ ಪ್ರೀತಿ, ಹೆಮ್ಮೆ, ನಮ್ಮದು ಎಂಬ ಮನಸ್ಥಿತಿ ಸದಾ ಜಾಗೃತವಾಗಿರಬೇಕು. ಕನ್ನಡ ಭಾಷೆ ನಾಡು ನುಡಿಯ ರಕ್ಷಣೆ ಎಲ್ಲರದ್ದೂ ಆಗಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿನ ಶಾಸಕರ ಭವನ ಕಟ್ಟಡದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ತಾಲ್ಲೂಕು ಘಟಕದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಪರ ಕಾರ್ಯಕ್ರಮಗಳು ಸಾಂಕೇತಿಕವಾಗಿ ನಡೆಯಬಾರದು. ಕಾರ್ಯಕ್ರಮಗಳಿಂದ ಮಾತ್ರ ಭಾಷೆ ಬೆಳೆಯುವುದೂ ಇಲ್ಲ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಕನ್ನಡ ಮಾತನಾಡುವುದು, ಕನ್ನಡ ಓದುವುದು, ಬರೆಯುವುದು ಅವಿಭಾಜ್ಯ ಅಂಗವಾಗಬೇಕು, ಅದುವೇ ಬದುಕು ಆಗಬೇಕು ಎಂದು ಹೇಳಿದರು.
ನಮ್ಮ ಈ ಭಾಗವು ಗಡಿಭಾಗಕ್ಕೆ ಅಂಟಿಕೊಂಡಿದ್ದು ತೆಲುಗು ಭಾಷೆಯ ಪ್ರಭಾವ ಇದ್ದರೂ ಕೂಡ ಅದು ವ್ಯವಹಾರಕ್ಕೆ, ಮಾತನಾಡುವುದಕ್ಕೆ ಮಾತ್ರ ಸೀಮಿತವಾಗಿದೆ. ಕನ್ನಡ ಮಾತ್ರ ಹೃದಯ, ಬದುಕಿನ ಭಾಷೆ ಆಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ನಿಂದ ಇನ್ನಷ್ಟು ಕನ್ನಡಪರ ಕಾರ್ಯಕ್ರಮಗಳು ಹೆಚ್ಚಬೇಕು. ಕೇವಲ ಶ್ರದ್ಧಾಂಜಲಿ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಮುಖ್ಯವಾಗಿ ಗಡಿಭಾಗದಲ್ಲಿ ಉತ್ತಮ ಆಯೋಜಿಸಿ ಅಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಮಾತನಾಡುವ, ವ್ಯವಹರಿಸುವ ಕೆಲಸ ಮತ್ತಷ್ಟು ಹೆಚ್ಚಬೇಕು ಎಂದು ಹೇಳಿದರು.
ಇದೀಗ ಕಚೇರಿಗೆ ಕಟ್ಟಡ ನೀಡಿದ್ದು ಇದು ಸದ್ಬಳಕೆ ಆಗಲಿ, ಕನ್ನಡ ಸಾಹಿತ್ಯ ಪರಿಷತ್ ನ ಎಲ್ಲ ಕನ್ನಡ ಪರ ಕಾರ್ಯಕ್ರಮಗಳಿಗೂ ನನ್ನ ನೆರವು ಸಹಕಾರ ಸದಾ ಇರಲಿದೆ ಎಂದು ಹೇಳಿದರು.
ಕನ್ನಡ ತಾಯಿಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪ ನಮನಗಳನ್ನು ಸಲ್ಲಿಸಲಾಯಿತು. ಜತೆಗೆ ಬಸವೇಶ್ವರರ ಭಾವಚಿತ್ರವಿಟ್ಟು ಪೂಜಿಸಿ ಬಸವೇಶ್ವರ ಜಯಂತಿಯನ್ನು ಸಹ ಆಚರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ನ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ತಹಶೀಲ್ದಾರ್ ಎನ್.ಗಗನಸಿಂಧು, ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಬಿಇಒ ನರೇಂದ್ರ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಆನಂದಕುಮಾರ್, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಟಿ.ಎಚ್.ಒ ಡಾ.ವೆಂಕಟೇಶ್ಮೂರ್ತಿ, ತಾದೂರು ರಘು, ಮೇಲೂರು ಮಂಜುನಾಥ್, ಎಸ್.ವಿ.ನಾಗರಾಜ್ರಾವ್, ಮೊಹಮ್ಮದ್ ಖಾಸಿಂ, ಎನ್.ಸುಂದರ್, ರೂಪಸಿ ರಮೇಶ್, ಮುನಿನಾರಾಯಣಪ್ಪ, ಡಾ.ಸತ್ಯನಾರಾಯಣರಾವ್, ಆರ್.ಸುಂದರಾಚಾರಿ, ಅಂಬಾರಿ ಮಂಜುನಾಥ್, ಎಚ್.ಕೆ.ಸುರೇಶ್, ಟಿ.ಟಿ.ನರಸಿಂಹಪ್ಪ, ಈ ಧರೆ ಪ್ರಕಾಶ್ ಹಾಜರಿದ್ದರು.