
Sidlaghatta : ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗುರುವಾರ ತಾಲ್ಲೂಕಿನ ಕುಂದಲಗುರ್ಕಿ ಮತ್ತು ಬಚ್ಚಹಳ್ಳಿಯ ಕಲ್ಯಾಣಿ ನೈರ್ಮಲ್ಯಿಕರಣ ಕಾರ್ಯವನ್ನು ಕೈಗೊಳ್ಳಲಾಯಿತು.
ಈ ಕಲ್ಯಾಣಿ ನೈರ್ಮಲ್ಯಿಕರಣ ಕಾರ್ಯಕ್ಕೆ ಚಾಲನೆ ನೀಡಿದ ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಮಾತನಾಡಿ,”ಈ ಶ್ರಮದಾನ ಮತ್ತು ಪುರಾತನ ಕಲ್ಯಾಣಿಗಳ ಸ್ವಚ್ಛತಾ ಅಭಿಯಾನದ ಉದ್ದೇಶವು ಜಲಸಂರಕ್ಷಣೆಯನ್ನು ಬಲಪಡಿಸುವುದು ಮತ್ತು ಗ್ರಾಮೀಣರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವುದಾಗಿದೆ. ನಮ್ಮ ಬಯಲುಸೀಮೆಯಲ್ಲಿ ನದಿ-ನಾಲೆಗಳ ಕೊರತೆಯಿಂದ ಕಲ್ಯಾಣಿಗಳು ಜಲಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳ ಸ್ವಚ್ಛತೆಯಿಂದ ನೀರು ಶೇಖರಣೆ ಸಾಧ್ಯವಾಗುತ್ತದೆ. ಜನಪ್ರತಿನಿಧಿಗಳು, ಸ್ಥಳೀಯರು ಸೇರಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ನಮ್ಮ ಉದ್ದೇಶ ಈಡೇರಲಿದೆ” ಎಂದು ಹೇಳಿದರು.
ಕಲ್ಯಾಣಿಗಳಲ್ಲಿ ಕಸ, ಕೊಳಚೆ ನೀರು ತೆಗೆದು ನೀರು ಶೇಖರಣೆ ಸಾಧ್ಯವಾದಾಗ ಬೇಸಿಗೆಯಲ್ಲಿ ಜಾನುವಾರುಗಳು, ರೈತರಿಗೆ ಉಪಯುಕ್ತವಾಗುತ್ತದೆ. ಗ್ರಾಮೀಣರಲ್ಲಿ ನೈರ್ಮಲ್ಯ ಮತ್ತು ಜಲಸಂರಕ್ಷಣೆಯ ಅರಿವು ಹೆಚ್ಚುತ್ತದೆ. ಇದರಿಂದ ಪರಿಸರ ಸುರಕ್ಷತೆ ಬಲಗೊಳ್ಳುತ್ತದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಸೂಚನೆಯಂತೆ ತಾಲ್ಲೂಕಿನ ಹಲವಾರು ಕಲ್ಯಾಣಿಗಳ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸ್ವಚ್ಛತಾ ಅಭಿಯಾನದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಆರ್. ಹೇಮಾವತಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿರ್ಮಲ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಯೋಜನಾಧಿಕಾರಿ ಅನಿಲ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ತಾಲ್ಲೂಕು ಪಶು ವೈದ್ಯಾಧಿಕಾರಿ ಶ್ರೀನಾಥ್ ರೆಡ್ಡಿ, ಕುಂದಲಗುರ್ಕಿ ಪಿ.ಡಿ.ಒ ಅಬುಬೂಕರ್ ಸಿದ್ದಿಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ನೋಡಲ್ ಅಧಿಕಾರಿ ವಿಜಯ್, ಕೊತ್ತನೂರು ಪಂಚಾಯಿತಿ ಪಿ.ಡಿ.ಒ ಪವಿತ್ರ, ಚೀಮಂಗಲ ಪಂಚಾಯಿತಿ ಪಿ.ಡಿ.ಒ ತನ್ವೀರ್ ಅಹ್ಮದ್, ತುಮ್ಮನಹಳ್ಳಿ ಪಂಚಾಯಿತಿ ಪಿ.ಡಿ.ಒ ಕ್ಯಾತ್ಯಾಯಿನಿ, ತಲಕಾಯಲಬೆಟ್ಟ ಪಿ.ಡಿ.ಒ ಶ್ರೀನಿವಾಸಪ್ಪ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ಎನ್.ಆರ್.ಎಲ್.ಎಂ ಸಿಬ್ಬಂದಿ, ನರೇಗಾ ಸಿಬ್ಬಂದಿ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು.