Devaramallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರಾವಣ ಮಾಸದ ನಾಲ್ಕು ಶನಿವಾರಗಳಂದು ರಾಮ ಭಜನೆ ತಂಡದ ಸದಸ್ಯರು ಮನೆ ಮನೆಗೆ ತೆರಳಿ ರಾಮ ಭಜನೆ ಮಾಡುವ ಮೂಲಕ ಭಿಕ್ಷಾಟನೆ ನಡೆಸುತ್ತಿದ್ದಾರೆ.
In English: In Devaramallur village of Sidlaghatta taluk, a Rama bhajana troupe goes door-to-door singing devotional songs on all four Saturdays of Sravana month, a tradition carried on from earlier generations. Grain and cash collected from households are gathered at the village’s Sri Kodandaramaswamy temple and later auctioned, with proceeds going to the temple hundi.
ಹಿರಿಯರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಈ ಆಚರಣೆಯನ್ನು ಗ್ರಾಮದ ಯುವಕರ ತಂಡವೂ ಮುಂದುವರಿಸಿಕೊಂಡು ಬಂದಿದೆ. ಪ್ರತಿ ಶನಿವಾರ ರಾಮನ ಭಾವಚಿತ್ರ ಹಾಗೂ ದೀಪಸ್ತಂಭಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿದ ಬಳಿಕ ಭಜನೆ ತಂಡದವರು ಮನೆಗಳಿಗೆ ತೆರಳುತ್ತಾರೆ.
ಮನೆಗಳಿಗೆ ತೆರಳಿದ ಸಂದರ್ಭದಲ್ಲಿ ಮಹಿಳೆಯರು ಅಕ್ಷಯ ಪಾತ್ರೆಗೆ ರಾಗಿಹಿಟ್ಟು, ಅಕ್ಕಿ, ಬೇಳೆ ಸೇರಿದಂತೆ ವಿವಿಧ ದವಸ ಧಾನ್ಯ ಹಾಗೂ ಹಣವನ್ನು ಭಕ್ತಿಯಿಂದ ನೀಡುತ್ತಾರೆ. ಸಂಗ್ರಹವಾದ ದವಸ ಧಾನ್ಯಗಳನ್ನು ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಸಂಗ್ರಹಿಸಲಾಗುತ್ತದೆ.
ಶ್ರಾವಣ ಮಾಸದ ನಾಲ್ಕು ಶನಿವಾರಗಳು ಪೂರ್ಣಗೊಂಡ ಬಳಿಕ ಸಂಗ್ರಹಿಸಿದ ದವಸ ಧಾನ್ಯಗಳನ್ನು ದೇವಾಲಯದ ಆವರಣದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಹರಾಜು ಮಾಡಲಾಗುತ್ತದೆ. ಹರಾಜಿನಿಂದ ಬಂದ ಹಣವನ್ನು ದೇವಾಲಯದ ಹುಂಡಿಗೆ ಅರ್ಪಿಸಲಾಗುತ್ತದೆ.
ರಾಮ ಭಜನೆ ತಂಡದ ಬಚ್ಚಪ್ಪ ಮಾತನಾಡಿ, “ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸುವ ಉದ್ದೇಶದಿಂದ ಶ್ರಾವಣ ಶನಿವಾರಗಳಲ್ಲಿ ಗ್ರಾಮದ ಪ್ರತಿ ಮನೆಗೂ ತೆರಳಿ ರಾಮನ ಭಜನೆ ಮಾಡುತ್ತಾ ಭಿಕ್ಷಾಟನೆ ನಡೆಸುತ್ತಿದ್ದೇವೆ. ಇದರಿಂದ ಗ್ರಾಮಕ್ಕೆ ಒಳಿತಾಗುವುದರ ಜತೆಗೆ ಲೋಕಕಲ್ಯಾಣವೂ ಆಗಲಿ ಎಂಬುದು ನಮ್ಮ ಆಶಯ” ಎಂದರು.
ಗ್ರಾಮಸ್ಥರಾದ ಬಿ.ಎಲ್. ಮುನಿರಾಜು, ರಾಮಣ್ಣ, ಮುನಿರಾಜು, ಎಸ್. ಮಂಜುನಾಥ್, ಮಲ್ಲೇಶಪ್ಪ, ವೆಂಕಟೇಶ್, ಆನಂದ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಯುವಕರು ರಾಮನ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ.

