
Cheemanahalli, Sidlaghatta: ಗ್ರಾಮೀಣ ಭಾಗದಲ್ಲಿ ಸಾಮರಸ್ಯ ಮೂಡಿಸುವಂತ ಜನಪದ ನೃತ್ಯ ಕಲೆಗಳು ಕಣ್ಮರೆಯಾಗುತ್ತಿರುವ ದಿನಗಳಲ್ಲಿ ಕೋಲಾಟದ ಎರಡನೇ ಪ್ರದರ್ಶನ ನೀಡುವ ಮೂಲಕ ಗ್ರಾಮೀಣ ಬಾಗದ ಜನರಲ್ಲಿ ಕಲಾಸಕ್ತಿ ಉಳಿದಿದೆ ಎಂಬುದನ್ನು ಸಾಕ್ಷೀಕರಿಸುತ್ತದೆ ಎಂದು ಜನಪದ ಕಲಾವಿದ ಈ ಧರೆ ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಚೀಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಾಂಜನೇಯ್ಯಸ್ವಾಮಿ ದೇವಸ್ಥಾನದ ಪ್ರತಿಷ್ಟಾಪನೆ ಅಂಗವಾಗಿ ಏರ್ಪಡಿಸಲಾಗಿದ್ದ ಜಡೆ ಕೋಲಾಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ವರದನಾಯಕನಹಳ್ಳಿ, ಹನುಮಂತಪುರ, ಶಿಡ್ಲಘಟ್ಟ ಮತ್ತು ಚೀಮನಹಳ್ಳಿಯ ಸುಮಾರು ಇಪ್ಪತ್ತು ಜನರು, ಕೋಲಾಟ ಗುರುಗಳಾದ ಹಾರಹೊಳ್ಳಿ ಇ.ಮುನಿಶಾಮಪ್ಪ ಮತ್ತು ಎಚ್.ಎಂ ಸುಬ್ಬರಾಯಪ್ಪ ಅವರಿಂದ ಸಾಂಪ್ರದಾಯಿಕ ಜನಪದ ನೃತ್ಯ ಕೋಲಾಟ ಕಲಿತು ಗ್ರಾಮೀಣ ಭಾಗದಲ್ಲಿ ಪ್ರದರ್ಶನ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕೋಲಾಟ ನೃತ್ಯದ ವೇಳೆ ಗಜಾನನ ಓಂ ಗಜಾನನ, ಕೋಲು ಕೋಲಣ್ಣ ಕೋಲೆ, ಎಕ್ಕೋಲೆ ಕೋಲಣ್ಣ ಕೋಲೆ, ಬಾರಪ್ಪೊ ಮಳೆರಾಯ, ಕೋಲು ಕೋಲೆ ಸುವ್ವಲಾಲಿ, ಕಮಲೆ ಸುರ್ರವಮ್ನೆ ಕೋಲೆ, ಮಾತಾಡ್ ಮಾತಾಡ್ ಮಲ್ಲಿಗೆ, ಗಲ್ಲುಗಲ್ಲುನೆತಾ ಗೆಜ್ಜೆ, ಚಲ್ಲಿದರು ಮಲ್ಲಿಗೇಯ ಬಾಣಾ ಸೂರೇರಿಮ್ಯಾಲೆ, ಮಾಯದಂತ ಮಳೆ ಬಂತಣ್ಣ, ಓ ಚನ್ನಿ ನಿನಗಂಡ ಬಲು ಜಾಣನೇ, ಹುತ್ತ ಹುಟ್ಟಿದರೇನು ಹುಳುವೇ ಕಟ್ಟಿದರೇನು ಹತ್ತದಲ್ಲೈತಣ್ಣ ಹಾವು, ಮಾತನಾಡಣ್ಣಯ್ಯ ಮಾತನಾಡು, ತಿಂಗಾಳು ಮುಳುಗಿದವೋ ರಂಗೋಲೆ ಬೆಳಗಿದವೋ ಸೇರಿದಂತೆ ಇನ್ನಿತರ ಹಾಡುಗಳಿಗೆ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದರು.
ಕೋಲಾಟ ನೃತ್ಯದಲ್ಲಿ ಹನುಮಂತಪುರ ಗ್ರಾಮದ ಹಾರ್ಮೋನಿಯಂ ಕಲಾವಿದ ಮುನಿರೆಡ್ಡಿ, ಹನುಮಂತರೆಡ್ಡಿ, ನಾಗಮ್ಮ, ಭವ್ಯಶ್ರಿ, ಮುನಿರಾಜು, ರತ್ನಮ್ಮ, ವರದನಾಯಕನಹಳ್ಳಿ ಪ್ರಭಾಕರ್, ದ್ಯಾವಣ್ಣ, ನೇತ್ರ, ಚೀಮನಹಳ್ಳಿ ತಬಲಾ ಕಲಾವಿದ ರಮೇಶ್, ಭಾಗ್ಯಮ್ಮ, ರಾಧಮ್ಮ, ಶಾಮಲಮ್ಮ, ತರುಣ್, ಧನುಷ್, ಅಭಿಲಾಷ್, ಶಿಡ್ಲಘಟ್ಟ ಮಂಗಳ, ಕನ್ಯಪ್ಪ, ಗಿರಿಜಮ್ಮ, ಗೀತಾ ಭಾಗವಹಿಸಿದ್ದರು.