
Sidlaghatta : ಕಳೆದ ಎರಡು ಭಾರಿ ನಡೆದ ಕ್ಷೇತ್ರದ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಪಕ್ಷೇತರರಾಗಿ ಸ್ಪರ್ಧಿಸಿ ಶ್ರಮಿಸಿದ್ದ ಸಮಾಜ ಸೇವಕ ಪುಟ್ಟು ಆಂಜಿನಪ್ಪ ಇದೀಗ ಕ್ಷೇತ್ರದ ಏಕೈಕ ಕಾಂಗ್ರೆಸ್ ಮುಖಂಡ ಎಂದು ಬಿಂಬಿಸಿಕೊಂಡು ತಿರುಗಾಡುತ್ತಿರುವುದು ಹಾಸ್ಯಾಸ್ಪದ ಎಂದು ಎಸ್.ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುತ್ತೂರು ವೆಂಕಟೇಶ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಮಾಜ ಸೇವಕ ಪುಟ್ಟು ಆಂಜಿನಪ್ಪ ಅವರು ಕಳೆದ 2018 ಹಾಗು 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ದವಾಗಿ ಚುನಾವಣೆಗೆ ಸ್ಪರ್ಧಿಸಿ ತಾವು ಸೋತದ್ದಷ್ಟೇ ಅಲ್ಲ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದವರು. ಇಂತಹವರನ್ನು ಪಕ್ಷದ ಹಿರಿಯ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿ ಪಕ್ಷ ಕಟ್ಟುವ ಜವಾಬ್ದಾರಿ ನೀಡಿರುವುದು ಸ್ವಾಗತಾರ್ಹ, ಇದರಲ್ಲಿ ನಮ್ಮದೇನೂ ತಕರಾರಿಲ್ಲ. ಆದರೆ ಪಕ್ಷದ ಅಧಿಕೃತ ಬಿ ಫಾರಂ ಪಡೆದು ಚುನಾವಣೆ ಎದುರಿಸಿ ಸೋತಂತಹ ರಾಜೀವ್ ಗೌಡರನ್ನು ಷಡ್ಯಂತ್ರ ಮಾಡಿ ಅವರನ್ನು ತುಳಿಯಲು ಯತ್ನಿಸುವುದರಿಂದ ನೀವು ನಾಯಕರಾಗಲ್ಲ. ಇತ್ತೀಚೆಗೆ ನಡೆದ ಒಂದು ಕಹಿ ಘಟನೆಯಿಂದ ರಾಜೀವ್ ಗೌಡರು ಸೇರಿದಂತೆ ನಾವುಗಳು ನೊಂದಿದ್ದೇವೆ. ಆ ಘಟನೆ ನಡೆಯಬಾರದಿತ್ತು, ನಡೆದಿದೆ. ಇದರಿಂದ ನಾವು ಪಶ್ಚಾತ್ತಾಪ ಪಟ್ಟಿದ್ದೇವೆ. ಪದೇ ಪದೇ ಇದನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ನೀವುಗಳು ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುವುದನ್ನು ಬಿಡಿ, ವೈಯಕ್ತಿಕ ಟೀಕೆಗಳನ್ನು ಮಾಡಿದರೆ ಜನರು ನಿಮ್ಮನ್ನು ಒಪ್ಪಲ್ಲ. ನೀವು ಪಕ್ಷ ಕಟ್ಟಲು ಬಂದಿದ್ದರೆ ಪಕ್ಷದ ಬಲವರ್ದನೆಗೆ ಶ್ರಮಿಸಿ. ಅದು ಬಿಟ್ಟು ಪಕ್ಷಕ್ಕಾಗಿ ದುಡಿದವರ ಕಾಲೆಳೆಯುವ ಕೆಲಸ ಮಾಡಬೇಡಿ ಎಂದರು.
ಕಾಂಗ್ರೆಸ್ ಯುವ ಮುಖಂಡರಾದ ನಾಗನರಸಿಂಹ, ನಾರಾಯಣಸ್ವಾಮಿ, ಗುಡಿಹಳ್ಳಿ ನರೇಂದ್ರ, ಬೆಳ್ಳೂಟಿ ಆನಂದ, ರವಿಪ್ರಕಾಶ್, ಮನು ಹಾಜರಿದ್ದರು.