
Sidlaghatta : ಜಾತಿ ನಿಂದನೆ ಮಾಡಿ ದಲಿತರ ಮೇಲೆ ನಡೆಸಿದ ಹಲ್ಲೆಯನ್ನು ಮರೆಮಾಚಲು ರಾಜಕೀಯ ಲೇಪನ ಹಚ್ಚುವ ಕೆಲಸವನ್ನು ಮಾಡುತ್ತಿರುವ ಸಮಾಜ ಸೇವಕ ಪುಟ್ಟು ಆಂಜಿನಪ್ಪ ತಮ್ಮ ಈ ದಲಿತ ವಿರೋಧಿ ಧೋರಣೆಯನ್ನು ಬಿಡಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಟಿ.ಎ.ಚಲಪತಿ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ದಸಂಸ ತಾಲ್ಲೂಕು ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಘೋಷ್ಠಿಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಗುರುವಾರ ನಡೆದ ಗಲಾಟೆಗೆ ದಲಿತರನ್ನು ಜಾತಿನಿಂದನೆ ಮಾಡಿದ್ದೇ ಕಾರಣ. ಆದರೆ ಸಮಾಜ ಸೇವಕ ಎಂದು ಹೇಳಿಕೊಳ್ಳುವ ಪುಟ್ಟು ಆಂಜಿನಪ್ಪ ದಲಿತರ ಮೇಲೆ ಹಲ್ಲೆ ನಡೆಸಿದ ಆರೋಪಿ ವಸಂತಾಚಾರಿಯ ಪರ ವಹಿಸುವ ಜೊತೆಗೆ ದಲಿತ ಮುಖಂಡರನ್ನು ಹೀಯಾಳಿಸುತ್ತಿರುವುದು ಖಂಡನೀಯ. ದಲಿತರು ತಮಗೆ ಸಂವಿಧಾನ ನೀಡಿರುವ ಅಟ್ರಾಸಿಟಿ ಪ್ರಕರಣ ದಾಖಲಿಸುತ್ತಾರೆ, ಇದರಿಂದ ಸಮಾಜದಲ್ಲಿ ಜನರು ಭಯಬೀತರಾಗಿ ಜೀವಿಸಬೇಕಿದೆ ಎಂಬ ಹೇಳಿಕೆ ನೀಡುವ ಅವರು ಇದೇ ಸಂವಿಧಾನ ನೀಡಿರುವ ಹಕ್ಕುಗಳಿಂದಲೇ ಕ್ಷೇತ್ರದ ಶಾಸಕರಾಗಲು ಕಳೆದ ಎರಡು ಅವಧಿಗಳಿಂದಲೂ ಪ್ರಯತ್ನ ನಡೆಸುತ್ತಿದ್ದೀರಿ ಎನ್ನುವುದನ್ನು ಮರೆಯಬಾರದು. ರಸ್ತೆಯಲ್ಲಿ ಕೂತು ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ನಿಮ್ಮ ಒಬ್ಬ ಚೇಲಾಗೋಸ್ಕರ ಇಡೀ ದಲಿತರನ್ನು ದೂರುವುದು ಸರಿಯಲ್ಲ ಎಂದರು.
ಗಂಜಿಗುಂಟೆ ಗ್ರಾ.ಪಂ ಮಾಜಿ ಅಧ್ಯಕ್ಷರು, ದಲಿತ ಮುಖಂಡರೂ ಆದ ಜಿ.ನರಸಿಂಹಮೂರ್ತಿ ಅವರು ಕಳೆದ ಹಲವಾರು ವರ್ಷಗಳಿಂದ ದಲಿತ ಸಂಘಟನೆಗಳು ಸೇರಿದಂತೆ ಸಕ್ರಿಯ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದಾರೆ. ಗ್ರಾ.ಪಂ, ತಾ.ಪಂ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರ ಅಧಿಕಾರಾವಧಿಯಲ್ಲಿ ಒಂದೇ ಒಂದು ಅಟ್ರಾಸಿಟಿ ಪ್ರಕರಣ ದಾಖಲಿಸಿದ ಇತಿಹಾಸ ಇಲ್ಲ. ಅಂತಹ ವ್ಯಕ್ತಿಯ ವಿರುದ್ದ ಬಾಯಿಗೆ ಬಂದಂತೆ ಮಾತನಾಡುವುದನ್ನು ಕೂಡಲೇ ನಿಲ್ಲಿಸಬೇಕು. ನೀವು ನಿಜವಾಗಿಯೂ ಕ್ಷೇತ್ರದ ಹಿತ ಬಯಸುವ ಜನಪ್ರತಿನಿಧಿಯಾಗಿದ್ದಲ್ಲಿ ಘಟನೆಯ ಬಗ್ಗೆ ಸಂಪೂರ್ಣ ತಿಳಿದು ತಪ್ಪಿತಸ್ಥರಿಗೆ ಬುದ್ದಿ ಹೇಳುವ ಕೆಲಸ ಮಾಡಬಹುದಿತ್ತು. ಅದು ಬಿಟ್ಟು ನೀವು ದಲಿತರ ವಿರುದ್ದ ಜಾತಿ ನಿಂದನೆ ಹಾಗೂ ಹಲ್ಲೆ ಮಾಡಿದ ಆರೋಪಿಯ ಪರ ನಿಂತು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಕೂಡಲೇ ಘಟನೆಯ ವಾಸ್ತವತೆ ತಿಳಿದುಕೊಳ್ಳುವ ಜೊತೆಗೆ ದಲಿತರ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ನಿಮ್ಮ ವಿರುದ್ದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಸಂಚಾಲಕ ಲಕ್ಕೇನಹಳ್ಳಿ ವೆಂಕಟೇಶ್, ಸಂಘಟನಾ ಸಂಚಾಲಕರಾದ ಹುಜಗೂರು ವೆಂಕಟೇಶ್, ಚನ್ನಕೇಶವ, ಖಜಾಂಚಿ ಅನಿಲ್ ಕುಮಾರ್, ಪದಾಧಿಕಾರಿಗಳಾದ ನರಸಿಂಹ ಎನ್.ಟಿ.ಆರ್, ಬಸಪ್ಪ, ಸುಬ್ರಮಣಿ, ನರಸಿಂಹಮೂರ್ತಿ, ಮುನಿಯಪ್ಪ, ಮುನಿಚಿನ್ನಪ್ಪ ಹಾಜರಿದ್ದರು.