Home News ಗೊರಮಡಗು ಗ್ರಾಮದಲ್ಲಿ “ಅಂಬೇಡ್ಕರ್ ಹಬ್ಬ”

ಗೊರಮಡಗು ಗ್ರಾಮದಲ್ಲಿ “ಅಂಬೇಡ್ಕರ್ ಹಬ್ಬ”

0
Sidlaghatta Goramadagu Ambedkar Jayanti

Goramadagu, Sidlaghatta : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರು ಶೋಷಿತ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಲ್ಲಿ ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ಎ.ಆರ್.ಎಂ. ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಕೆ ಮೂರ್ತಿ ಸಾಮ್ರಾಟ್ ತಿಳಿಸಿದರು.

ತಾಲ್ಲೂಕಿನ ಗೊರಮಡಗು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಹಾಗೂ ಡಾ. ಬಾಬು ಜಗಜೀವನ್ ರಾಮ್ 119ನೇ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ “ಅಂಬೇಡ್ಕರ್ ಹಬ್ಬ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳಿಗೆ ಕಾನೂನಾತ್ಮಕ ಹಕ್ಕುಗಳು ಮತ್ತು ಆತ್ಮಗೌರವವನ್ನು ಸಂವಿಧಾನದ ಮೂಲಕ ದೊರಕಿಸಿಕೊಟ್ಟರೆ, ಬಾಬು ಜಗಜೀವನ ರಾಮ್ ಅವರು ಆಡಳಿತ ವ್ಯವಸ್ಥೆಯ ಒಳಗೆ ಉನ್ನತ ಹುದ್ದೆಗಳನ್ನು ಅಲಂಕರಿಸಿ, ತಳವರ್ಗದವರೂ ದೇಶದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಮಾನ ಪಾಲುದಾರರಾಗಬಲ್ಲರು ಎಂಬುದನ್ನು ಸಾಬೀತುಪಡಿಸಿದರು ಎಂದು ಹೇಳಿದರು.

ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಶೋಷಣೆಯ ವಿರುದ್ಧ, ಸಮಾನತೆಗಾಗಿ ಹೋರಾಡಿದ ಮಹಾನ್ ಚೇತನರು. ಅವರ ಜಯಂತಿಯನ್ನು ಗ್ರಾಮ ಮಟ್ಟದಲ್ಲಿ ಎಲ್ಲಾ ಸಮುದಾಯದವರು ಒಂದಾಗಿ ಆಚರಿಸುತ್ತಿರುವುದು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕವಿ ಜನ ನಾಗಪ್ಪ ಮಾತನಾಡಿ, ಬಾಲ್ಯದಲ್ಲಿ ಅಸ್ಪೃಶ್ಯತೆಯಂತಹ ಅಮಾನವೀಯ ನೋವುಗಳನ್ನು ಅನುಭವಿಸಿದರೂ ಅದನ್ನು ಧೈರ್ಯದಿಂದ ಎದುರಿಸಿ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಸಾಧನೆ ದೊಡ್ಡದು ಎಂದು ಬಣ್ಣಿಸಿದರು.

ಗ್ರಾಮದ ಬೀದಿಗಳು ನೀಲಿ ಬಂಟಿಂಗ್ಸ್‌ಗಳಿಂದ ಕಂಗೊಳಿಸುತ್ತಿದ್ದವು, ಕಲಾತಂಡಗಳೊಂದಿಗೆ ತಮಟೆ ವಾದ್ಯಗಳು, ಕೀಲು ಕುದುರೆ ಹಾಗೂ ಗಾರಡಿ ಗೊಂಬೆಗಳ ಮೆರವಣಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದಲ್ಲದೆ ಕಾರ್ಯಕ್ರಮಕ್ಕೆ ಮೆರಗು ನೀಡಿದವು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಗದೀಶ್ ಹಾಗೂ ಪಿಡಿಒ ಪವಿತ್ರ ಅವರು ಅಂಬೇಡ್ಕರ್ ಭಾವಚಿತ್ರದ ನಾಮಫಲಕದ ಮುಂದೆ ಕೇಕ್ ಕತ್ತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದ ಜನರೆಲ್ಲಾ ಭಾಗವಹಿಸಿ “ಅಂಬೇಡ್ಕರ್ ಹಬ್ಬ”ವನ್ನು ಅದ್ದೂರಿಯಾಗಿ ಆಚರಿಸಿದರು.

ಕಾರ್ಯಕ್ರಮದ ಅಂಗವಾಗಿ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಹಾಗೂ ಗ್ರಾಮದಲ್ಲಿ ಸರ್ಕಾರಿ ಉದ್ಯೋಗ ಪಡೆದ ಯುವಕರಿಗೆ ವೇದಿಕೆಯಲ್ಲಿ ಗೌರವ ಸನ್ಮಾನ ಮಾಡಲಾಯಿತು. ಭಾಗವಹಿಸಿದ ಎಲ್ಲರಿಗೂ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ದೇವರ ಮಳ್ಳೂರು ಮಹೇಶ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಚಾರ್ವಿ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳು ಮನಮೋಹಕ ನೃತ್ಯ ಪ್ರದರ್ಶನ ನೀಡಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಡಿ.ಎಸ್.ಎಸ್ ನಾರಾಯಣಸ್ವಾಮಿ, ಕೆ. ರಾಮಾಂಜಿನಪ್ಪ, ಶಿಕ್ಷಕ ಶ್ರೀನಿವಾಸ್, ಗೋಪಾಲಗೌಡ, ವಕೀಲ ಭಾಸ್ಕರ್, ದೇವರ ಮಳ್ಳೂರು ಮಹೇಶ್, ಮೈತ್ರಿ ಲೋಕೇಶ್, ವಕೀಲ ನಾಗರಾಜ್, ಡಿಶ್ ಮಂಜುನಾಥ್, ವೆಂಟರೋಣಪ್ಪ, ಶ್ರೀನಿವಾಸ್, ಮುನಿ ನಾರಾಯಣಸ್ವಾಮಿ, ನರಸಿಂಹಪ್ಪ, ನಾರಾಯಣಸ್ವಾಮಿ, ಮುನಿಕೃಷ್ಣ, ನಾಗರಾಜಪ್ಪ, ಕೇಶವರೆಡ್ಡಿ ,ವೆಂಕಟೇಶ್, ರಾಜೇಶ್, ಪಿಳ್ಳ ಮಂಜುನಾಥ್, ಹಾಗೂ ಗ್ರಾಮಸ್ಥರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version