
Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆ ಪ್ರದೇಶವನ್ನು ಅಭಿವೃದ್ದಿಪಡಿಸಿ ಕೈಗಾರಿಕೆಗಾಗಿ ಭೂಮಿ ಬಿಟ್ಟುಕೊಡುವ ಎಲ್ಲ ರೈತರಿಗೂ ನ್ಯಾಯಯುತವಾಗಿ ಪರಿಹಾರದ ಹಣವನ್ನು ಸಕಾಲಕ್ಕೆ ನೀಡಬೇಕು ಮತ್ತು ಪ್ರತಿ ಕುಟುಂಬಕ್ಕೂ ಒಂದು ಉದ್ಯೋಗ ನೀಡಬೇಕೆಂದು ರೈತ ಸಂಘದ ಸಮೂಹಿಕ ನಾಯಕತ್ವದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತೀಶ್ ಆಗ್ರಹಿಸಿದರು.
ಜಿಲ್ಲೆಯ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ತಾಲ್ಲೂಕಿನ ನಡಿಪಿನಾಯಕನಹಳ್ಳಿ ಗ್ರಾಮದಲ್ಲಿ ಸಂಘದ ರೈತರ ಸಭೆ ನಡೆಸಿ ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯ ಮಂಡಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪೂರ್ಣ ಸಚಿವ ಸಂಪುಟ ಜೂನ್ 19 ರಂದು ಜಿಲ್ಲೆಯ ವಿಶ್ವ ಪ್ರಸಿದ್ಧ ನಂದಿಗಿರಿಧಾಮದಲ್ಲಿ ನಡೆಸುತ್ತಿರುವುದು ನಮ್ಮೆಲ್ಲರಿಗೂ ಖುಷಿಯ ವಿಚಾರ. ಈ ಜಿಲ್ಲೆಯ ಅಭಿವೃದ್ದಿಗೆ ಮತ್ತು ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುವ ಆಶಯ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ ಕೃಷ್ಣಾ ನದಿಯಿಂದ ಕನಿಷ್ಟ 24 ಟಿಎಂಸಿ ನೀರನ್ನು ತಂದು ಕೆರೆಗಳಿಗೆ ತುಂಬಿಸಿ ಕುಡಿಯಲು ಮತ್ತು ಕೃಷಿಗೆ ಬಳಸಿ ರೈತರ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಕೆಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಯ ನೀರಿನಲ್ಲಿ ಫ್ಲೋರೈಡ್ ಹಾನಿಕರ ಅಂಶಗಳು ಕಂಡುಬಂದಿರುವುದರಿಂದ ವಿಜ್ಞಾನಿಗಳ ಶಿಫಾರಸ್ಸಿನಂತೆ ಮೂರನೇ ಹಂತದ ಶುದ್ಧೀಕರಣ ಘಟಕವನ್ನು ಕೂಡಲೇ ಸ್ಥಾಪಿಸಲು ಒತ್ತಾಯಿಸಿದರು.
ಆರು ತಿಂಗಳಿನಿಂದ ಬಾಕಿ ಉಳಿದಿರುವ ಹಾಲಿನ ಪ್ರೋತ್ಸಾಹ ಧನವನ್ನು ತಕ್ಷಣ ಬಿಡುಗಡೆ ಮಾಡಿ, ಪ್ರತಿ ಲೀಟರ್ ಹಾಲಿಗೆ ಕನಿಷ್ಟ 50 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ಮೂಲಕ ನೀಡುತ್ತಿದ್ದ ಮಹಿಳಾ ಸ್ತ್ರೀ ಶಕ್ತಿ ಸಂಘಗಳ ಸಾಲ ಮರುಪ್ರಾರಂಭಿಸಿ ಮಹಿಳಾ ಸಬಲೀಕರಣಕ್ಕೆ ನೆರವಾಗಬೇಕು, ಮಾವು ಬೆಳೆಯುಲು ನಿರ್ಬಂಧದಿಂದ ನಷ್ಟ ಅನುಭವಿಸುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಜಂಗಮಕೋಟೆ ಹೋಬಳಿ ಕೈಗಾರಿಕಾ ಪ್ರದೇಶದ ಜಮೀನುಗಳ ರೈತ ಹೋರಾಟ ಸಮಿತಿ ಹಾಗೂ ರೈತ ಸಂಘದ ಪ್ರಮುಖ ಮುಖಂಡರು ಭಾಗವಹಿಸಿದ್ದರು.