
Kannamangala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಗಂಗರಾಜು ಅವರ ಹಿಪ್ಪುನೇರಳೆ ಸೊಪ್ಪಿಗೆ ದುಷ್ಕರ್ಮಿಗಳು ವಿಷವನ್ನು ಸಿಂಪಡಿಸಿದ್ದರಿಂದಾಗಿ ರೇಷ್ಮೆ ಹುಳುಗಳು ಸಾವಿಗೀಡಾಗಿವೆ.
ಹಣ್ಣಾದ ಹಂತದಲ್ಲಿದ್ದ ಒಟ್ಟಾರೆ 150 ಮೊಟ್ಟೆಗಳ ಹುಳುಗಳು ಸತ್ತಿರುವುದರಿಂದ ರೈತರಿಗೆ ಸುಮಾರು ರೂ ನಷ್ಟವಾಗಿದೆ.
ಗಂಗರಾಜು ಅವರ ಹಿಪ್ಪುನೇರಳೆ ತೋಟದಲ್ಲಿ ಸೊಪ್ಪಿಗೆ ದುಷ್ಕರ್ಮಿಗಳು ವಿಷ ಸಿಂಪಡಿಸಿದ್ದು, ಆ ಸೊಪ್ಪನ್ನು ಹುಳುಗಳಿಗೆ ತಿನ್ನಲು ಹಾಕಿದ್ದರಿಂದ ಸಂಪೂರ್ಣ ಬೆಳೆ ನಾಶವಾಗಿದೆ.
ಇದು ಇದೇ ಮೊದಲಲ್ಲ, ಈ ಹಿಂದೆಯೂ ಕಿಡಿಗೇಡಿಗಳು ತೋಟಕ್ಕೆ ವಿಷ ಹಾಕಿದ್ದರು. ಆಗ ಪೊಲೀಸ್ ಠಾಣೆಗೆ ದೂರು ಸಹ ನೀಡಲಾಗಿತ್ತು. ಪೊಲೀಸರು ಕರೆಸಿ ಮುಂದೆ ಹೀಗಾಗಲ್ಲ ಎಂದು ಹೇಳಿ ಕಳುಹಿಸಿದ್ದರಾದರೂ ಪದೇ ಪದೇ ಕಿಡಿಗೇಡಿಗಳು ತೋಟಕ್ಕೆ ವಿಷ ಹಾಕುವುದು ಮಾತ್ರ ನಿಂತಿಲ್ಲ ಎಂದು ರೈತ ಗಂಗರಾಜು ಆರೋಪಿಸುತ್ತಾನೆ.
ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದ ರೇಷ್ಮೆ ಇಲಾಖೆಯ ಅಧಿಕಾರಿಗಳು ಸೊಪ್ಪಿಗೆ ವಿಷ ಸಿಂಪಡನೆ ಆಗಿರುವುದು ದೃಢೀಕರಿಸಿದ್ದು, ಅದರಿಂದಲೇ ಹುಳುಗಳು ಸತ್ತಿವೆ ಎಂದು ಹೇಳಿದ್ದಾರೆ. ಈ ವಿಷಯವಾಗಿ ರೈತ ಪೋಲೀಸರಿಗೆ ದೂರು ನೀಡಿದ್ದಾರೆ.