
Sidlaghatta : ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವವನ್ನು (Kempegowda Jayanti) ಒಕ್ಕಲಿಗರ ಸಂಘದ ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿ ವತಿಯಿಂದ ಆರ್ಥಪೂರ್ಣವಾಗಿ ಮತ್ತು ಭಾವಪೂರ್ಣವಾಗಿ ಜೂನ್ 27 ರ ಮಂಗಳವಾರ ಆಚರಿಸುವುದಾಗಿ ಆಚರಣಾ ಸಮಿತಿ ಸದಸ್ಯ ಜೆ.ಎಸ್.ವೆಂಕಟಸ್ವಾಮಿ ತಿಳಿಸಿದರು.
ಶಿಡ್ಲಘಟ್ಟ ನಗರದ ಒಕ್ಕಲಿಗರ ಸಂಘದ ಭವನದಲ್ಲಿ ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾಡಪ್ರಭು ಶ್ರೀ ಕೆಂಪೇಗೌಡರಿಗೆ ಗೌರವ ಸಲ್ಲಿಸುವುದರ ಜೊತೆಗೆ ಅವರ ತ್ಯಾಗ, ಬಲಿದಾನ, ಬೆಂಗಳೂರು ನಿರ್ಮಾಣ, ಎಲ್ಲಾ ಸಮುದಾಯದವರ ಏಳ್ಗೆಗೆ ಕೈಗೊಂಡ ಕ್ರಮಗಳು, ಒಟ್ಟಾರೆ ನಾಡನ್ನು ಅವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಕಟ್ಟಿರುವ ಆದರ್ಶವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಲಿದ್ದೇವೆ. ವಿಶ್ವದಲ್ಲಿ ಮಾದರಿ ವ್ಯಕ್ತಿಗಳಲ್ಲೊಬ್ಬರಾದ ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಪೂಜ್ಯರು, ಹಾಲಿ ಹಾಗೂ ಮಾಜಿ ಶಾಸಕರು, ರಾಜ್ಯ ಸಂಘದ ನಿರ್ದೇಶಕರು ಭಾಗವಹಿಸಿಲಿದ್ದಾರೆ.
ಜೂನ್ 27 ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ನಾಡಪ್ರಭು ಕೆಂಪೇಗೌಡರ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ನಗರದ ಬಸ್ ನಿಲ್ದಾಣದಿಂದ ಮೆರವಣಿಗೆ ಪ್ರಾರಂಭವಾಗಿ ದಿಬ್ಬೂರಹಳ್ಳಿ ರಸ್ತೆಯ ನ್ಯಾಯಾಲಯ ಸಂಕೀರ್ಣದ ಮುಂಭಾಗದ ರಸ್ತೆ ಬದಿಯಲ್ಲಿನ ವೇದಿಕೆಯ ಬಳಿಯವರೆಗೂ ನಡೆಯಲಿದೆ. ವಿವಿಧ ಗ್ರಾಮಗಳ ಪಲ್ಲಕ್ಕಿಗಳು, ಕಲಾ ತಂಡಗಳು, ವೇಷಭೂಷಣಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ನೂರು ಮಂದಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂಗಳಂತೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು. ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಅರ್ಥಪೂರ್ಣವಾಗಿ ಆಚರಿಸಲಿದ್ದೇವೆ ಎಂದರು.
ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿಯ ಬಿ.ನಾರಾಯಣಸ್ವಾಮಿ, ಕೆ.ಎನ್.ಸುಬ್ಬಾರೆಡ್ಡಿ, ಆರ್.ಎ.ಉಮೇಶ್, ಬಿ.ಕೆ.ಶ್ರೀನಿವಾಸ್, ಚೀಮನಹಳ್ಳಿ ಗೋಪಾಲ್, ಪ್ರಕಾಶ್, ಆನೂರು ದೇವರಾಜ್, ಸಿ.ಎಂ.ಮುನಿರಾಜು, ಪುರುಷೋತ್ತಮ್, ಪ್ರಭು, ಪ್ರಸನ್ನ ಹಾಜರಿದ್ದರು.