
Sidlaghatta : ಸರ್ಕಾರಿ ಜಮೀನು ಮತ್ತು ಸರ್ಕಾರಕ್ಕೆ ಕೊಡಲು ಒಪ್ಪಿರುವ ರೈತರ ಜಮೀನು ಒಟ್ಟುಗೂಡಿಸಿದರೆ 2200 ಎಕರೆ ಜಮೀನು ಆಗುತ್ತದೆ. ಅನಗತ್ಯ ಸುಳ್ಳು ಪ್ರಚಾರಕ್ಕೆ ಕಿವಿಗೊಡದೆ ಸರ್ಕಾರ ಕೆ.ಐ.ಎ.ಡಿ.ಬಿ ಸ್ಥಾಪನೆ ಮಾಡಬೇಕು ಎಂದು ಸಾಮೂಹಿಕ ನಾಯಕತ್ವದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ ಒತ್ತಾಯಿಸಿದರು.
ಜಂಗಮಕೋಟೆ ಹೋಬಳಿ ಕೆ.ಐ.ಎ.ಡಿ.ಬಿ 13 ಹಳ್ಳಿಗಳ ರೈತರ ಪರ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ಭಾಗದ ಹೆಣ್ಣುಮಕ್ಕಳು ದೊಡ್ಡಬಳ್ಳಾಪುರ, ನರಸಾಪುರ ಮುಂತಾದೆಡೆಗೆ ಉದ್ಯೋಗಕ್ಕೆ ಹೋಗುತ್ತಿದ್ದಾರೆ. ಇಲ್ಲೇ ಕೈಗಾರಿಕೆಗಳು ಆದರೆ ಅನುಕೂಲಕರ. ನಮ್ಮ ಭಾಗದ ರೈತಾಪಿ ಯುವಕರಿಗೆ ಹೆಣ್ಣುಗಳು ಸಿಗದೇ, ಅವಿವಾಹಿತರಾಗಿ ಉಳಿದಿದ್ದಾರೆ. ಇದಕ್ಕೂ ಕೈಗಾರೀಕರಣ ಪರಿಹಾರವಾಗಬಲ್ಲದು ಎಂದರು.
ಕದಸಂಸ ತಾಲ್ಲೂಕು ಸಂಚಾಲಕ ರಾಮಾಂಜಿನಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ರೈತರ ಎರಡೂ ಬಣಗಳು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಟವನ್ನು ಕಳೆದ ಒಂದು ತಿಂಗಳಿನಿಂದಲೂ ಮಾಡುತ್ತಾ ಬಂದಿವೆ. ಈಗ ರೈತರ ಹೋರಾಟದ ನಡುವೆ ರಾಜಕೀಯ ಕೆಸರೆರೆಚುವಾಟ ಪ್ರಾರಂಭವಾಗಿದೆ. ಚಿಕ್ಕಬಳ್ಳಾಪುರದ ಸಂಸದರು, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡರು, ಎಂ.ರಾಜಣ್ಣ, ಯಲುವಳ್ಳಿ ರಮೇಶ್ ಅವರು ಆಗಮಿಸಿ ಇನ್ನೊಂದು ಬಣದ ರೈತರೊಂದಿಗೆ ಮಾತ್ರ ಚರ್ಚಿಸಿ, ಅವರ ಅಗವಾಲನ್ನು ಸ್ವೀಕರಿಸಿ ಮಾತನಾಡಿದರು. ಅವರುಗಳಿಗೆ ಪಾಪ ನಾವು ರೈತರೆಂದು ಅನ್ನಿಸಿಯೇ ಇಲ್ಲ. ಬಂದಂತಹ ಮುಖಂಡರು ರೈತರ ವೇದಿಕೆಯನ್ನು ರಾಜಕೀಯ ವೇದಿಕೆಯನ್ನಾಗಿ ಮಾಡಿಕೊಂಡರು ಎಂದು ಆರೋಪಿಸಿದರು.
ರೈತ ಮುಖಂಡ ಗಂಗಾಧರ್ ಮಾತನಾಡಿ, ರೈತ ಹೋರಾಟದಲ್ಲಿ ರಾಜಕೀಯ ನಾಯಕರು ಬಂದು ಹುಳಿ ಹಿಂಡುವುದು ಬೇಡ. ನಮ್ಮ ಜಮೀನುಗಳನ್ನು ನಾವು ಮಾರುವುದಕ್ಕೆ ಯಾರ ಅಪ್ಪಣೆ ಬೇಕಿಲ್ಲ. ಎರಡೂ ರೈತರ ಗುಂಪುಗಳ ಸಮಸ್ಯೆ ಆಲಿಸಿದಾಗ ಮಾತ್ರ ನೈಜ ಸ್ಥಿತಿ ಅರ್ಥವಾಗುತ್ತದೆ. ರಾಜಕೀಯ ಮಾಡಲು ರೈತ ಹೋರಾಟವನ್ನು ಮಾತ್ರ ಬಳಸಿಕೊಳ್ಳಬೇಡಿ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುಬ್ರಮಣಿ, ಕದಿರೇಗೌಡ, ಕೆಐಎಡಿಬಿ ಹೋರಾಟ ಸಮಿತಿ ಸದಸ್ಯರಾದ ಬಸವಪಟ್ಟಣ ಪ್ರಭುಗೌಡ, ನಾಗರಾಜ್, ಕನಕಪ್ಪ, ವಾಸುದೇವ ಮೂರ್ತಿ, ಪ್ರಮೊದ್, ಜಂಗಮಕೋಟೆ ಜೆ.ಸಿ.ಮಂಜಣ್ಣ, ನಾರಾಯಣಸ್ವಾಮಿ, ಯಣ್ಣಂಗೂರಿನ ಈರಪ್ಪ, ಮಧು, ಗಂಗಾಧರ್ ಹಾಜರಿದ್ದರು.