Home News ಕುತ್ತಾಂಡಹಳ್ಳಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೊಳವೆಬಾವಿಗೆ ಹೊಸ ಪಂಪು ಮೋಟಾರ್

ಕುತ್ತಾಂಡಹಳ್ಳಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೊಳವೆಬಾವಿಗೆ ಹೊಸ ಪಂಪು ಮೋಟಾರ್

0
Sidlaghatta Kuttandahalli Drinking Water Problem

Kuttandahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿಯ ಕುತ್ತಾಂಡಹಳ್ಳಿ ಗ್ರಾಮದಲ್ಲಿ ಕೊಳವೆಬಾವಿಗೆ ಹೊಸ ಪಂಪು ಮೋಟಾರ್ ಬಿಟ್ಟು ನೀರನ್ನು ಹರಿಸಿದ್ದು ಕುತ್ತಾಂಡಹಳ್ಳಿ ಗ್ರಾಮಸ್ಥರು ಖುಷಿಯಾಗಿದ್ದಾರೆ. ವಾರದಿಂದಲೂ ತಲೆ ದೋರಿದ್ದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿದಿದೆ.

ಕುತ್ತಾಂಡಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಕೊಳವೆಬಾವಿಯಲ್ಲಿ ದಿಢೀರ್ ಅಂತ ನೀರು ಖಾಲಿಯಾಗಿದೆ. ಇನ್ನೊಂದು ಕೊಳವೆಬಾವಿಯಲ್ಲಿ ನೀರು ಇತ್ತಾದರೂ ಅದಕ್ಕೆ ಪಂಪು ಮೋಟಾರ್ ಇರಲಿಲ್ಲ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತಲೆ ದೋರಿತ್ತು.

ಗ್ರಾಮಸ್ಥರ ದಿನ ನಿತ್ಯದ ಬಳಕೆ, ದನಕರುಗಳಿಗೆ ಕುಡಿಯಲು ಕೂಡ ಹನಿ ನೀರಿಲ್ಲದೆ ಪರದಾಡಿದ ಗ್ರಾಮಸ್ಥರು ಸೋಮವಾರ ಖಾಲಿ ಕೊಡಗಳೊಂದಿಗೆ ದೇವರಮಳ್ಳೂರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ತಿಂಗಳಿಂದಲೂ ನೀರಿಲ್ಲ. ಯಾರನ್ನು ಕೇಳಿದರೂ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ನಾವು ಯಾರನ್ನು ಕೇಳೋದು. ಪಂಚಾಯಿತಿಯಲ್ಲಿ ದುಡ್ಡಿಲ್ಲ ಅಂತಾರೆ ಎಂದು ಅವಲತ್ತುಕೊಂಡಿದ್ದರು.

ನಾಲ್ಕೈದು ದಿನ ಸಮಯ ಕೊಡಿ. ಶಾಸಕರನ್ನು ಮತ್ತು ಹಿರಿಯ ಅಧಿಕಾರಿಗಳನ್ನು ಕೇಳಿ ಹೊಸ ಮೋಟಾರ್ ಪಂಪು ಬಿಟ್ಟು ನೀರು ಕೊಡುತ್ತೇನೆ. ಅದುವರೆಗೂ ಟ್ಯಾಂಕರ್ ನೀರು ಕೊಡುತ್ತೇನೆ ಎಂದು ಪಿಡಿಒ ಸಿದ್ದೀಕ್ ಅವರು ಪ್ರತಿಭಟನಾಕಾರರಿಗೆ ಭರವಸೆ ಕೊಟ್ಟಿದ್ದರು.

ಅದರಂತೆ ಎರಡು ದಿನಗಳಲ್ಲಿಯೆ ಹೊಸ ಪಂಪು ಮೋಟಾರ್ ಖರೀದಿಸಿ ಕೊಳವೆ ಬಾವಿಗೆ ಬಿಟ್ಟಿದ್ದಾರೆ. ನೀರು ಹರಿದಿದೆ. ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ಪಿಡಿಒ ಸಿದ್ದೀಕ್, ದೇವರಮಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಪೇಗೌಡ ಅವರು ಸ್ಥಳದಲ್ಲೇ ಬೀಡು ಬಿಟ್ಟು ನೀರು ಹರಿಸಿದ್ದಾರೆ. ಸ್ಥಳೀಯರು ಕೂಡ ಜೊತೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಇಒ ಆರ್.ಹೇಮಾವತಿ ಅವರು, ಕುತ್ತಾಂಡಹಳ್ಳಿ ಗ್ರಾಮದಲ್ಲಿ ವಾರ ಹತ್ತು ದಿನಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿತ್ತು. ಈ ಬಗ್ಗೆ ಏನು ಮಾಡಬೇಕೆಂದು ಶಾಸಕರ ಬಳಿ ಮಾತನಾಡಿ ಟಾಸ್ಕ್ ಫೋರ್ಸ್ ಮೀಟಿಂಗ್‌ ನಲ್ಲಿ ನಿರ್ಧಾರ ಕೈಗೊಂಡಂತೆ ಶಾಸಕರ ಸೂಚನೆಯಂತೆ ಹೊಸ ಮೋಟಾರ್ ಪಂಪು ಖರೀದಿಸಿ ಕೊಳವೆಬಾವಿಗೆ ಬಿಟ್ಟು ನೀರು ಹರಿಸಲಾಗಿದೆ ಎಂದರು.

ಇದೀಗ ಬೇಸಿಗೆ ದಿನಗಳು ಆರಂಭವಾಗಿದ್ದು ಕುಡಿಯುವ ನೀರಿನ ಸಮಸ್ಯೆ ಎದುರಾಗುವುದು ಸಹಜ. ಎಲ್ಲಿಯೆ ಆಗಲಿ ಸಮಸ್ಯೆ ಎದುರಾದರೆ ಕೂಡಲೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆಧ್ಯತೆ ನೀಡುವಂತೆ ಎಲ್ಲ ಪಿಡಿಒಗಳಿಗೂ ಈಗಾಗಲೆ ಸೂಚಿಸಿದ್ದೇವೆಂದರು.

ಜನ ಸಾಮಾನ್ಯರು ಕೂಡ ಸಮಸ್ಯೆ ಎದುರಾದಾಗ ಅದನ್ನು ಪರಿಹರಿಸಲು ಒಂದೆರಡು ದಿನಗಳ ಸಮಯ ತಗಲುತ್ತದೆ. ದಯ ಮಾಡಿ ತಾಳ್ಮೆ ವಹಿಸಿ ಎಂದು ಮನವಿ ಮಾಡಿದ ಅವರು, ನೀರನ್ನು ಅನಗತ್ಯವಾಗಿ ವ್ಯರ್ಥ ಮಾಡದೆ ಹಿತ ಮಿತವಾಗಿ ಬಳಸಿ ಎಂದು ಸಾರ್ವಜನಿಕರಲ್ಲಿ ಕೋರಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version