
Sidlaghatta : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಮಾ.11ರಿಂದ ಮಾ.15ರವೆರೆಗೂ ಮುಷ್ಕರವನ್ನು ನಡೆಸಲಿದ್ದಾರೆ. ಒಂದೊಮ್ಮೆ ಸರ್ಕಾರ ಸ್ಪಂಧಿಸದಿದ್ದಲ್ಲಿ ಅರ್ನಿರ್ಧಿಷ್ಟ ಕಾಲ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ತಾಲ್ಲೂಕು ವೈದ್ಯರು ಮತ್ತು ಸಿಬ್ಬಂದಿ ಪ್ರಜಾಸೌಧಕ್ಕೆ ತೆರಳಿ ತಹಶೀಲ್ದಾರ್ ಜಿ.ಗಗನಸಿಂಧು ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ ಅವರು, ಹಲವು ವರ್ಷಗಳಿಂದಲೂ ಸರ್ಕಾರಕ್ಕೆ ನಮ್ಮ ಕಷ್ಟಗಳನ್ನು ಹೇಳಿಕೊಂಡು ಮನವಿ ಸಲ್ಲಿಸುವುದು, ಸಾಂಕೇತಿಕ ಪ್ರತಿಭಟನೆ ಮಾಡುವುದು ಸೇರಿ ಎಲ್ಲ ರೀತಿಯ ಪ್ರಯತ್ನಕ್ಕೂ ಸರ್ಕಾರ ಸೂಕ್ತವಾಗಿ ಸ್ಪಂಧಿಸಿಲ್ಲ.
ಆದ್ದರಿಂದ ಅನಿವಾರ್ಯವಾಗಿ ಅರ್ನಿರ್ಧಿಷ್ಟ ಮುಷ್ಕರ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾ.11ರಂದು ಎಲ್ಲ ವೈದ್ಯರು, ಸಿಬ್ಬಂದಿ, ಹೊರ ಗುತ್ತಿಗೆ ನೌಕರರೆಲ್ಲರೂ ಸೇರಿ ಕೈಗೆ ಕಪ್ಪು ಪಟ್ಟಿ ಧರಿಸುತ್ತೇವೆ. ಹೊರ ರೋಗಿಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಮಾನವೀಯ ದೃಷ್ಟಿಯಿಂದ ಅಪಘಾತ ಇನ್ನಿತರೆ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ಮಾ.15ರತನಕ ನೋಡಿ ಅಲ್ಲಿಗೂ ಸರ್ಕಾರ ಸ್ಪಂಧಿಸದಿದ್ದಲ್ಲಿ ಮಾ.15ರ ನಂತರ ಯಾವುದೆ ರೀತಿಯ ಚಿಕಿತ್ಸೆ ನೀಡದೆ ಅರ್ನಿರ್ಧಿಷ್ಠಾವಧಿ ಮುಷ್ಕರ ನಡೆಸಲಾಗುವುದು ಎಂದು ವಿವರಿಸಿದರು.
ಬೇಡಿಕೆಗಳೇನು :
ರಾಜ್ಯದಲ್ಲಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸಕಾಲಕ್ಕೆ ಔಷಧಿ ಪೂರೈಕೆ ಮಾಡಬೇಕು. ವೃಂದ ನೇಮಕಾತಿ 1973ರಡಿ 3 ವರ್ಷಕ್ಕೊಮ್ಮೆ ತಿದ್ದುಪಡಿ ತರಬೇಕು. ಜೇಷ್ಠತಾ ಪಟ್ಟಿ ಪ್ರಕಟಿಸಬೇಕು. ಎಲ್ಲ ವೃಂದಗಳಿಗೂ 5 ವರ್ಷಕ್ಕೊಮ್ಮೆ ಮುಂಬಡ್ತಿ ನೀಡಬೇಕು. ವರ್ಗಾವಣೆ ಕಾಯಿದೆಯನ್ನು ನೂನ್ಯತೆಗಳನ್ನು ಸರಿಪಡಿಸಬೇಕು, ಅವೈಜ್ಞಾನಿಕ ವರ್ಗಾವಣೆ ಪದ್ದತಿಯನ್ನು ನಿಲ್ಲಿಸಬೇಕು ಎಂಬಿತ್ಯಾದಿ ಬೇಡಿಕೆಗಳು ಸೇರಿ 11 ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮುಷ್ಕರ ಆರಂಭವಾಗಲಿದೆ.
ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮನೋಹರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ದೇವರಾಜ್, ಟಿ.ಟಿ.ನರಸಿಂಹಪ್ಪ ಹಾಜರಿದ್ದರು.