
ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 234ರ ಬೊಮ್ಮನಹಳ್ಳಿ ಗೇಟ್ ಸಮೀಪ ಸೋಮವಾರ ಕಾರು ಮತ್ತು ಟಿವಿಎಸ್ ಚಾಂಪ್ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದ ರಾಮಚಂದ್ರಪ್ಪ (61) ಎಂದು ಗುರುತಿಸಲಾಗಿದೆ.
ಚಿಂತಾಮಣಿ ಕಡೆಯಿಂದ ಶಿಡ್ಲಘಟ್ಟದತ್ತ ಬರುತ್ತಿದ್ದ ಕಾರು ಬೊಮ್ಮನಹಳ್ಳಿ ಗೇಟ್ ಸಮೀಪ ಟಿವಿಎಸ್ ಚಾಂಪ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಾಮಚಂದ್ರಪ್ಪ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿವಿಎಸ್ ಚಾಂಪ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಜಖಂಗೊಂಡಿವೆ. ಅಪಘಾತದಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಸ್ಥಳೀಯರು ಹಾಗೂ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಚಿಂತಾಮಣಿ–ಶಿಡ್ಲಘಟ್ಟ ನಡುವಿನ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಗೇಟ್ ಗಳು ಹಾಗೂ ಜನವಸತಿ ಪ್ರದೇಶಗಳ ಸಮೀಪ ಅತಿವೇಗದ ವಾಹನ ಸಂಚಾರದಿಂದ ಅಪಘಾತಗಳ ಆತಂಕ ಎದುರಾಗಿದೆ. ಈ ಪ್ರದೇಶಗಳಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ನಿಖರ ಕಾರಣ ತನಿಖೆಯ ಬಳಿಕ ತಿಳಿದುಬರಬೇಕಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದೇ ಬೊಮ್ಮನಹಳ್ಳಿ ಗೇಟ್ ಬಳಿ ಈ ಹಿಂದೆಯೂ ಅಪಘಾತ ಸಂಭವಿಸಿತ್ತು, ಈ ಪ್ರದೇಶದಲ್ಲಿ ಅಪಘಾತ ವಲಯ ಪುನರಾವರ್ತನೆಯಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
In English: A 61-year-old motorcyclist, Ramachandrappa of Kundalagurki village, died on the spot after a car collided with his TVS Champ two-wheeler near Bommanahalli Gate on National Highway 234 on Monday. Police said the car, traveling from Chintamani towards Sidlaghatta, hit the bike, then veered off and struck a roadside tree. The body was sent for post-mortem, and a case has been registered at Sidlaghatta Rural police station; investigators suspect speeding and negligent driving, with the exact cause to be confirmed. Residents have demanded speed-control measures on this stretch of the highway near populated areas.
